ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 130ನೇ ಜಯಂತ್ಯುತ್ಸವ ನಿಮಿತ್ತ ಭಾನುವಾರ ಶರಣರ ಜಾನಪದ ಗಾಯನ ಸ್ಪರ್ಧೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಜಾನಪದ ಪರಿಷತ್ನ ಅಧ್ಯಕ್ಷ ಅಶೋಕ ಮೈನಾಳೆ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ಆದರ್ಶ, ಚಿಂತನೆ ಪರಿಚಯಿಸುವ ನಿಟ್ಟಿನಲ್ಲಿ ಪಟ್ಟದ್ದೇವರ ಜಯಂತ್ಯುತ್ಸವ ನೆಪದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲಿ ಶರಣರ ಜಾನಪದ ಸ್ಪರ್ಧೆಯು ಒಂದಾಗಿದೆ ಎಂದು ತಿಳಿಸಿದರು.
ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಜಯಂತ್ಯುತ್ಸವ ನಿಮಿತ್ತ ಕಳೆದ ಎರಡು ವರ್ಷಗಳಿಂದ ಲಿಂಗೈಕ್ಯ ಎಸ್.ಎಸ್.ತರಡಿ ಮುಂಬೈ ಅವರ ಪ್ರಾಯೋಜಕತ್ವದಲ್ಲಿ ಶರಣರ ಜಾನಪದ ಗಾಯನ ಸ್ಪರ್ಧೆ ನಡೆಸಲಾಗುತ್ತಿದೆ. ಪುರಷರ ಹಾಗೂ ಮಹಿಳೆಯರ ಪ್ರತ್ಯೇಕ ಸ್ಪರ್ಧೆ ನಡೆಸಿ ಮೊದಲ ಮೂರು ಸ್ಥಾನ ಪಡೆಯುವ ಕಲಾವಿದರಿಗೆ ಡಿ-22 ರಂದು ಪಟ್ಟದ್ದೇವರ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರಮಾಣ ಪತ್ರದ ಜತೆಗೆ ಕ್ರಮವಾಗಿ ₹2500, ₹1500, ₹1000 ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಬಸವರಾಜ ಶರಣರು ಸಮ್ಮುಖ ವಹಿಸಿ ಮಾತನಾಡಿದರು. ವ್ಯಾಪಾರಸ್ಥ ಸೋಮನಾಥಪ್ಪ ಅಷ್ಟೂರೆ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಮಲ್ಲಮ್ಮ ಆರ್. ಪಾಟೀಲ, ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಪ್ರಭು ಡಿಗ್ಗೆ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಆಶಾ ರಾಠೋಡ್, ಚಂದ್ರಶೇಖರ ಎಮ್ಮೆ, ರಾಜೇಶ ಮುಗಟೆ, ಸಂತೋಷ ಹಡಪದ, ದಿಲೀಪ ಜೋಳದಾಪಕೆ, ನಿರ್ಣಯಕರಾದ ಸಂಗಯ್ಯ ಸ್ವಾಮಿ, ಶಿವಾಜಿ ಸಗರ, ರಾಜ ಕುಮಾರ ಮದಕಟ್ಟಿ, ಕಪಿಲ ಕುಮಾರ ಸೂರ್ಯವಂಶಿ ಇದ್ದರು. ಹಿರಿಯ ಸಾಹಿತಿ ವೀರಣ್ಣ ಕುಂಬಾರ ವಂದಿಸಿದರು.
ಪುರುಷರ ವಿಭಾಗದಿಂದ ಹಾವಗೆಪ್ಪ ಬಸಪ್ಪ ನುಲೇ ಪ್ರಥಮ ಸ್ಥಾನ. ರಾಮಚಂದ್ರ ಕಾಶಿನಾಥ ದ್ವಿತೀಯ ಮತ್ತು ದೇವಿದಾಸ ಚಿಮಕೋಡ್ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಮಹಿಳೆಯರ ವಿಭಾಗದಿಂದ ಸುಗಮ್ಮ ಸಂಗಪ್ಪ ಹಿಪ್ಪಳಗಾಂವ ಪ್ರಥಮ ಸ್ಥಾನ ಪಡೆದುಕೊಂಡರೆ, ಮಂಜುಳಾ ರಾಜಕುಮಾರ(ದ್ವಿತೀಯ) ಸ್ಥಾನ ಮತ್ತು ರಕ್ಷಿತಾ ರಮೇಶ ಲಾದಾ, ಸಂಪೂರ್ಣ ಕರಿಮಣಿ ಸಂಗಮ (ತೃತೀಯ)ಸ್ಥಾನ ಪಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.