ಬೀದರ್: ಬೆಳೆಗಳ ರೋಗ ನಿರ್ವಹಣೆಗೆ ರೈತರು ಜೈವಿಕ ವಿಧಾನ ಅನುಸರಿಸುವುದು ಸೂಕ್ತ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಹೇಳಿದರು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಕೆವಿಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ಆನ್ಲೈನ್ನಲ್ಲಿ ಶನಿವಾರ ತೊಗರಿ ಮತ್ತು ಕಡಲೆ ಬೆಳೆಗಳಲ್ಲಿ ರೋಗಗಳ ಸಮಗ್ರ ನಿರ್ವಹಣೆ ಕುರಿತ ರೈತರಿಗೆ ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ರೋಗ ನಿರ್ವಹಣಾ ವಿಧಾನದ ಕುರಿತು ರೈತರಿಗೆ ಮನದಟ್ಟು ಮಾಡಿಕೊಡುವ ಅಗತ್ಯ ಇದೆ ಎಂದು ತಿಳಿಸಿದರು.
ಬೆಳೆಗಳ ರೋಗಗಳನ್ನು ಸರಿಯಾದ ಸಮಯಕ್ಕೆ ಗುರುತಿಸಿ ನಿರ್ವಹಿಸಿದ್ದಲ್ಲಿ ಆಗಬಹುದಾದ ಹಾನಿಯನ್ನು ತಪ್ಪಿಸಬಹುದು ಎಂದು ಹೇಳಿದರು.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಾಧಿಕಾರಿ ಡಾ. ಅರುಣಕುಮಾರ ಹೊಸಮನಿ ಮಾತನಾಡಿ, ಬೀದರ್ ಕೃಷಿ ವಿಜ್ಞಾನ ಕೇಂದ್ರದ ಸರಣಿ ಕಾರ್ಯಕ್ರಮವು ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಕಲಬುರ್ಗಿಯ ಕೃಷಿ ಸಂಶೋಧನೆ ಕೇಂದ್ರದ ಸಸ್ಯರೋಗ ಶಾಸ್ತ್ರಜ್ಞ ಡಾ. ಮಲ್ಲಿಕಾರ್ಜುನ ಕೆಂಗನಾಳ ಅವರು, ತೊಗರಿಗೆ ಬಾಧಿಸುವ ಬೂದಿ ರೋಗ, ಚಿಬ್ಬು ರೋಗ, ಹಳದಿ ನಂಜು ರೋಗ, ಮುಟುರು ರೋಗ, ನೆಟೆ ರೋಗ, ಗೊಡ್ಡು ರೋಗ, ಸೊರಗು ರೋಗ, ಕಡಲೆಯಲ್ಲಿ ಕಾಣಿಸುವ ಪ್ಯೂಸಿರಿಯಂ ಸೊರಗು ರೋಗ, ಒಣ ಬೇರು ಕೊಳೆ ರೋಗ, ಕಾಂಡ ಕೊಳೆ ರೋಗ, ಮಚ್ಚೆ ರೋಗ, ತುಕ್ಕು ರೋಗಗಳ ಲಕ್ಷಣ ಹಾಗೂ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳ 53 ರೈತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.