ಕಮಲನಗರ: ತಾಲ್ಲೂಕಿನ ಹೊಕರಣಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಅಚ್ಚಿಗಾಂವೆ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ಕಾರಣ ಬಸವಕಲ್ಯಾಣ ಉಪವಿಭಾಗಾಧಿಕಾರಿ ರಮೇಶ ಕೋಲಾರ ಅವರ ನೇತೃತ್ವದಲ್ಲಿ ಸೋಮವಾರ ವಿಶೇಷ ಸಭೆ ನಡೆಯಿತು.
ಈ ಗ್ರಾಮ ಪಂಚಾಯಿತಿಯಲ್ಲಿ 17 ಸದಸ್ಯರಿದ್ದು, ಅವರಲ್ಲಿ 10 ಜನ ಸದಸ್ಯರು ಮೇ 4ರಂದು ಸಹಿ ಹಾಕಿ ಅವಿಶ್ವಾಸ ನಿರ್ಣಯ ಮಂಡನೆಗೆ ಅರ್ಜಿ ಸಲ್ಲಿಸಿದ್ದರು. ಬಸವಕಲ್ಯಾಣದ ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗೆ ನೋಟಿಸ್ ನೀಡಲಾಗಿತ್ತು. ಸೋಮವಾರ ಸಭೆ ನಡೆಸಲಾಯಿತು. ಸಭೆಗೆ 10 ಜನ ಸದಸ್ಯರು ಹಾಜರಾಗಿದ್ದರು. ಉಳಿದ 12 ಜನ ಗೈರಾಗಿದ್ದರು. ಕೋರಂ ಭರ್ತಿಯಾಗಲು 12 ಜನ ಬೇಕಾಗಿತ್ತು. ಉಪ ವಿಭಾಗಾಧಿಕಾರಿಗಳು 1 ಗಂಟೆಯವರೆಗೆ ಸಮಯ ನೀಡಿದರೂ ಉಳಿದ ಸದಸ್ಯರು ಹಾಜರಾಗಲಿಲ್ಲ. ಆದ್ದರಿಂದ ಸಭೆ ಮೊಟಕು ಗೊಳಿಸಲಾಯಿತು. ‘ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಾದೇವ ಅಚ್ಚಿಗಾಂವೆ ಅವರು ಮುಂದುವರಿಯಲಿದ್ದಾರೆ’ ಎಂದು ಪಿಡಿಒ ಕೃಷ್ಣಪ್ಪ ಚವಾಣ್ ತಿಳಿಸಿದರು.ಡಿಇಒ ವಿಠ್ಠಲ, ಹೊಕರಣಾ ಪೊಲೀಸ್ ಠಾಣೆ ಎಎಸ್ಐ ಮಲ್ಲಿಕಾರ್ಜುನ ಬಿರಾದಾರ, ಸುಧಾಕರ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.