ಚಿಟಗುಪ್ಪ: ‘ಶಾಲಾ ಮಕ್ಕಳಿಗೆ ಡಿಪಿಟಿ, ಟಿಡಿ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ರೋಗ ಮುಕ್ತರನ್ನಾಗಿ ಮಾಡಿ’ ಎಂದು ಆರೋಗ್ಯ ಸಹಾಯಕಿ ಶೋಭಾ ಅವರು ಹೇಳಿದರು.
ನಿರ್ಣಾ ಗ್ರಾಮದ ನಂದಿನಿ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದರು.
‘ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಈ ಲಸಿಕೆ ಹಾಕಬೇಕು. ಸಾಧಾರಣ ಜ್ವರ, ಗಂಟಲು ನೋವು ಮತ್ತು ನುಂಗಲು ತೊಂದರೆ ಆಗುವುದು, ಗಂಟಲಿನಲ್ಲಿ ಬೂದು ಬಣ್ಣದ ದಪ್ಪ ಪೊರೆ, ಕತ್ತಿನ ದುಗ್ದರಸ ಗ್ರಂಥಿಗಳ ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳ ಉರಿತ ಇವು ಗಂಟಲು ಮಾರಿಯ ಲಕ್ಷಣಗಳಾಗಿವೆ’ ಎಂದು ವಿವರಿಸಿದರು.
ಮುಖ್ಯಶಿಕ್ಷಕಿ ಉಮಾಶ್ರೀ ಮಾತನಾಡಿ,‘ಎರಡು–ಮೂರು ವಾರ ವಿಪರೀತ ಕೆಮ್ಮು, ಆಗಾಗ ವಾಂತಿ, ಒಂದೇ ಸಮನೆ ಕೆಮ್ಮು, ಕೊನೆಗೆ ಬರುವ ‘ವೂಫ್’ ಎಂಬ ಶಬ್ಧ ನಾಯಿ ಕೆಮ್ಮಿನ ಲಕ್ಷಣ. ದೇಹದ ಇತರ ಭಾಗಗಳು ಸೆಟೆಯುವುದು, ಉಸಿರಾಟ ತೊಂದರೆ ಮತ್ತು ಸಾವು ಸಹ ಸಂಭವಿಸಬಹುದು ಇವು ಧನುರ್ವಾಯು ರೋಗದ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡುಬಂದ ತಕ್ಷಣ ಪಾಲಕರು ಮಕ್ಕಳಿಗೆ ವೈದ್ಯರ ಬಳಿ ಪರೀಕ್ಷಿಸಬೇಕು’ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆ ರಾಜೇಶ್ವರಿ ಮಾತನಾಡಿ,‘5 ರಿಂದ 6 ವರ್ಷದ ಒಳಗಿನ (1ನೇ ತರಗತಿ) ಮಕ್ಕಳಿಗೆ ಡಿಪಿಟಿ (ಡಿಫ್ತೀರಿಯ, ಪರ್ಟುಸಿಸ್ ಮತ್ತು ಟೆಟನಸ್) ಲಸಿಕೆ, 10 ರಿಂದ 16 ವರ್ಷ ವರ್ಷದ ಮಕ್ಕಳಿಗೆ ಟಿಡಿ (ಟೆಟನಸ್, ಡಿಫ್ತೀರಿಯಾ) ಲಸಿಕೆ, ಈ ರೀತಿಯಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.
ಆಶಾ ಕಾರ್ಯಕರ್ತೆ ರಂಗಮ್ಮ, ಶಿಕ್ಷಕಿಯರಾದ ಶ್ವೇತಾ, ವಿಕ್ಟೊರಿಯಾ, ಮಮತಾ, ಭಾಗ್ಯಶ್ರೀ, ಝರೇಮ್ಮ ಹಾಗೂ ವನೀತಾ ಇದ್ದರು. ಗುರುಸ್ವಾಮಿ ಸ್ವಾಗತಿಸಿದರು. ಬಿಸಲಪ್ಪ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.