
ಬೀದರ್: ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯದಾದ್ಯಂತ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಮುಖ್ಯಸ್ಥ ಭೀಮಾ ತಿಳಿಸಿದರು.
ಫೆ.2ರಂದು ಜಾಥಾಕ್ಕೆ ಚಾಲನೆ ನೀಡಲಾಗಿದೆ. ಈ ತಿಂಗಳ 17ರ ವರೆಗೆ ರಾಜ್ಯದಾದ್ಯಂತ ಜಾಥಾ ಸಂಚರಿಸಲಿದೆ. ಬೀದರ್ ನಗರದಲ್ಲಿ ಫೆ. 4ರಂದು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ನಮ್ಮ ಈ ಜಾಥಾಕ್ಕೆ ಹಲವಾರು ಸಂಘಟನೆಗಳು ಕೈ ಜೋಡಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಲಿಂಗತ್ವ ಬದಲಾವಣೆಗಾಗಿ ಸುಮಾರು ₹5 ರಿಂದ ₹6 ಲಕ್ಷದ ವರೆಗೆ ಖರ್ಚು ಬರಲಿದೆ. ಸರ್ಕಾರವೇ ಈ ವೆಚ್ಚ ಭರಿಸಿ ನಮಗೆ ನ್ಯಾಯ ಒದಗಿಸಬೇಕು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಮಹೇಶ ಗೋರನಾಳಕರ್ ಮಾತನಾಡಿ, ವ್ಯಕ್ತಿಯ ಘನತೆ ಹಾಗೂ ಗೌರವ ಎತ್ತಿ ಹಿಡಿಯುವ ಕೆಲಸ ಸಂವಿಧಾನ ಮಾಡುತ್ತಿದೆ. ಅದರ ಆಶಯದಂತೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಅವರ ಬೇಕು, ಬೇಡಿಕೆಗಳನ್ನು ಸರ್ಕಾರ ಪ್ರಾಮಾಣಿಕ ರೀತಿಯಲ್ಲಿ ಈಡೇರಿಸಬೇಕೆಂದು ಒತ್ತಾಯಿಸಿದರು.
ಓಂಪ್ರಕಾಶ ರೊಟ್ಟೆ ಮಾತನಾಡಿ, ಎಲ್ಲ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಔಷಧ ಪೂರೈಕೆಯಾಗಬೇಕು. ಹೊರಗೆ ಚೀಟಿ ಬರೆದು ಕೊಡುವುದು ನಿಲ್ಲಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದಾರ ಮಾತನಾಡಿ, ಪ್ರತಿ ಸಲವೂ ಚಿಕಿತ್ಸೆಯ ಖರ್ಚಿನಲ್ಲಿ ಶೇ 60ರಿಂದ ಶೇ 70ರಷ್ಟು ಔಷಧಿ ಖರ್ಚು ಇರುತ್ತದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಸಿಗಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಔಷಧಿ ಉಚಿತವಾಗಿ ಲಭ್ಯವಾಗುತ್ತಿರಬೇಕು. ತಮಿಳುನಾಡು, ಕೇರಳದ ಮಾದರಿ ಅನುಸರಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.