
ಭಾಲ್ಕಿ: ಹಿಂದೂ ಸಮಾಜ ಗಟ್ಟಿಯಾದರೆ ಮಾತ್ರ ಭಾರತಕ್ಕೆ ಶಕ್ತಿ ಬರಲಿದೆ. ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಬೇಕು ಎಂದು ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ್ ರಾಮಚಂದ್ರ ಎಡಕೆ ಹೇಳಿದರು.
ತಾಲ್ಲೂಕಿನ ದಾಡಗಿ ಗ್ರಾಮದಲ್ಲಿ ಹಿಂದೂ ಸಮ್ಮೇಳನ ಆಯೋಜನಾ ಸಮಿತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ರಾಷ್ಟ್ರ ವಿಶ್ವ ಗುರುವಿನ ಸ್ಥಾನಕ್ಕೇರಬೇಕಾದರೆ ಹಿಂದೂ ಸಮಾಜ ಜಾಗೃತವಾಗಬೇಕು. ಅಂದಾಗ ಮಾತ್ರ ಧರ್ಮ, ಸಂಸ್ಕೃತಿ ಸರ್ವಶ್ರೇಷ್ಠವಾಗಲು ಸಾಧ್ಯ. ಹಿಂದೂ ಸಮಾಜ ಒಳ ಮತ್ತು ಹೊರಗಿನ ಸಮಸ್ಯೆಗಳ ಬಗ್ಗೆ ಜಾಗೃತವಾಗಬೇಕಾಗಿದೆ. ಇದಕ್ಕಾಗಿ ನಾವೆಲ್ಲರೂ ಒಂದು. ನಾವೆಲ್ಲರೂ ಹಿಂದೂ. ನಾವೆಲ್ಲರೂ ಬಂಧು ಎಂಬ ಭಾವನೆಯೊಂದಿಗೆ ನಮ್ಮ ಒಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾಮರಸ್ಯ, ಕುಟುಂಬ ಪ್ರಭೋದನ, ಪರಿಸರ ಸಂರಕ್ಷಣೆ, ಸ್ವದೇಶಿ, ನಾಗರಿಕ ಶಿಷ್ಟಾಚಾರ ಎಂಬ ಪಂಚ ಪರಿವರ್ತನೆ ಕಾರ್ಯಕ್ರಮಗಳ ಮೂಲಕ ಹಿಂದೂ ಸಮಾಜ ಒಗ್ಗೂಡಲು ಸಂಕಲ್ಪ ಮಾಡಬೇಕಾಗಿದೆ’ ಎಂದು ತಿಳಿಸಿದರು.
ಗುರಯ್ಯಾ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಹಿಂದೂ ಸಮ್ಮೇಳನ ನಿಮಿತ್ತ ಗ್ರಾಮದ ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ್ದ ನೂರಾರು ಪ್ರಮುಖರು, ವಿದ್ಯಾರ್ಥಿಗಳು, ಯುವಕರು, ಅಭಿಮಾನಿಗಳು ಕೊರಳಲ್ಲಿ ಭಗವಾ ಶಾಲು, ತಲೆಗೆ ಭಗವಾ ಟೋಪಿ, ಕೈಯಲ್ಲಿ ಭಗವಾ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ಜೈ ಶ್ರೀರಾಮ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.
ಶೋಭಾಯಾತ್ರೆಯು ಶಿವಾಜಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಸಮಾವೇಶಗೊಂಡಿತು. ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಬಿರಾದಾರ, ಉಪಾಧ್ಯಕ್ಷ ಅಮರ ಧೂಳೆ, ಪದ್ಮಾಕರ ಮಲ್ಲೇಶಿ, ದಯಾನಂದ ಪವಾರ್, ಸಂಗಮೇಶ ಭೌರಾ, ಸಂಗಮೇಶ ಕೋಟೆ, ಪ್ರಶಾಂತ ಮಾಕಾ, ಭೀಮರಾವ್ ವಾಂಜರಖೇಡೆ, ತಾನಾಜಿ ಹಜ್ಜಿರ್ಗೆ, ದಿನೇಶ ಪರಸಣ್ಣೆ, ಹವಗೆಪ್ಪಾ ಧೂಳೆ, ಸತೀಶ ಮುದ್ದಾಳೆ, ಶಿವಕುಮಾರ ತಮಾಸಂಗೆ, ರಾಹುಲ್ ಮಾಶೆಟ್ಟೆ, ದತ್ತು ಕುಲಕರ್ಣಿ, ಈಶ್ವರ ರುಮ್ಮಾ, ಮಹೇಶ ಲಿಗಾಡೆ, ಚಂದ್ರಕಾಂತ ಕಂದಗೂಳೆ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.