ADVERTISEMENT

ಹುಲಸೂರ: ಕೇಂದ್ರ ಸ್ಥಾನದಲ್ಲಿ ವಾಸವಿರದ ಪಿಡಿಒ, ಲೆಕ್ಕಾಧಿಕಾರಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:20 IST
Last Updated 27 ಡಿಸೆಂಬರ್ 2025, 6:20 IST
ಹುಲಸೂರ ತಾಲ್ಲೂಕ ಪಂಚಾಯಿತಿ ಕಚೇರಿ
ಹುಲಸೂರ ತಾಲ್ಲೂಕ ಪಂಚಾಯಿತಿ ಕಚೇರಿ   

ಹುಲಸೂರ: ಸಾರ್ವಜನಿಕರಿಗೆ ಅಧಿಕಾರಿಗಳ ಶೀಘ್ರ ಲಭ್ಯತೆ, ಆಡಳಿತಕ್ಕೆ ಚುರುಕು ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳನ್ನು ಮಾಡಿದ್ದರೂ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡದಿರುವುದರಿಂದ ಗ್ರಾಮೀಣ ಭಾಗದ ತುರ್ತು ಕೆಲಸಗಳಿಗೆ ತೊಂದರೆ ಉಂಟಾಗಿ ಜನ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.

ಕೆಲಸದ ಸ್ಥಳದಲ್ಲೇ ವಾಸವಿರಬೇಕು ಎಂಬ ನಿಯಮವಿದ್ದರೂ ಪಾಲನೆ ಅಧಿಕಾರಿಗಳು ಮಾಡುತ್ತಿಲ್ಲ.

ಬೆಳಿಗ್ಗೆ ಗ್ರಾಮಕ್ಕೆ ಹೋಗಿ ಸಂಜೆ ಪಟ್ಟಣಕ್ಕೆ ವಾಪಸಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಭೆ ಹಾಗೂ ಇತರೆ ಕಾರ್ಯಕ್ರಮದ ನೆಪ ಹೇಳಿ ವಾರಾನುಟ್ಟಲೇ ಗ್ರಾಮದಿಂದ ದೂರ ಉಳಿಯುತ್ತಿದ್ದಾರೆ. ಪಟ್ಟಣದಲ್ಲಿರುವ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಮನೆಗಳಿಗೆ ಜನ ಅಲೆಯಬೇಕಾಗಿದ್ದು ಸ್ಥಳೀಯ ಆಡಳಿತಕ್ಕೆ ಮಂಕು ಕವಿದಿದೆ. 

ADVERTISEMENT

ನರೇಗಾ ಕಾಮಗಾರಿ ವೇತನ, ಜಾಗದ ಅಳತೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಕೆಲಸಕ್ಕೆ ಪಿಡಿಒ ವಾರಗಳ ಕಾಲ ಕೈಗೆ ಸಿಗುತ್ತಿಲ್ಲ. ಕಚೇರಿಗೆ ಬಂದ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ಸಿಬ್ಬಂದಿ ವಿಚಾರಿಸಿದರೆ, ‘ಸಭೆಗೆ ಹೋಗಿದ್ದಾರೆ. ನಾಳೆ ಬರುತ್ತಾರೆ’ ಎನ್ನುವ ಸಿದ್ಧ ಮಾದರಿ ಉತ್ತರಗಳನ್ನು ಕೊಡುತ್ತಾರೆ. 

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಬೇಕಾಗಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜವಾಬ್ದಾರಿ ಮರೆತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನರ ಮೂಲಸೌಕರ್ಯಗಳ ಬಗ್ಗೆ ಕಾಳಜಿ ಇಲ್ಲದೇ  ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥ ದೂರಿದರು.

ಸಮೀಪದ ಗಡಿಗೌಡಗಾಂವ್ ಗ್ರಾಮದಲ್ಲಿ ಚರಂಡಿ ನೀರು ಮುಖ್ಯ ರಸ್ತೆ ಮೇಲೆ ಹರಿಯುತ್ತಿದೆ. ಮೀರಖಲ ಗ್ರಾಮದ ಓಣಿಯಲ್ಲಿ ಚರಂಡಿ ನೀರು ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿದೆ. ಹುಲಸೂರ ಮುಖ್ಯ ರಸ್ತೆ ಬದಿಯಲ್ಲಿಯೇ ಕಸದ ರಾಸಿ ಬಿದ್ದಿದೆ. ಹಾಲಹಳ್ಳಿ, ತೊಗಲುರ ಗ್ರಾಮದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿವೆ. ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದಲ್ಲ ಒಂದು ಸಮಸ್ಯೆ ಇದೆ.

‘ಪಂಚಾಯಿತಿಯಲ್ಲಿ ಪಿಡಿಒ ಇಲ್ಲದ ವೇಳೆಯಲ್ಲಿ ಬಿಲ್ ಕಲೆಕ್ಟರ್ ಹಾಗೂ ನೀರು ಪೂರೈಕೆ ಸಿಬ್ಬಂದಿಯ ಆಟ ಜೋರಾಗಿದೆ. ಪಿಡಿಒಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಪಂಚಾಯಿತಿಗೆ ಬಂದ ವೇಳೆ ಪಿಡಿಒಗಳು, ಗ್ರಾಮದಲ್ಲಿ ಇದ್ದವರಂತೆ ಫೋಸು ಕೊಡುತ್ತಾರೆ. ಜನರ ಕೆಲಸ ಮಾಡಲು ಪಿಡಿಒಗಳನ್ನು ನೇಮಕ ಮಾಡಲಾಗಿದೆ. ಜನರ ದುಡ್ಡಿನಲ್ಲೇ ಅವರಿಗೆ ಸಂಬಳ ನೀಡಲಾಗುತ್ತಿದೆ. ಆದರೆ, ಪಿಡಿಒಗಳು ಜನರ ಕೈಗೆ ಸಿಗುತ್ತಿಲ್ಲ’ ಎನ್ನುವುದು ಗ್ರಾಮಸ್ಥರು ಆಕ್ರೋಶ. 

ಪಿಡಿಒಗಳು ಕೇಂದ್ರ ಸ್ಥಾನದಲ್ಲೇ ವಾಸಮಾಡಬೇಕು ಎಂದು ಸರ್ಕಾರದ ಆದೇಶ ಇದೆ. ಈ ನಿಯಮ ಪಾಲಿಸದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು
ಮಹಾದೇವ ಜಮ್ಮು ಇಒ ಹುಲಸೂರ
ಕೇಂದ್ರ ಸ್ಥಾನದಲ್ಲಿಯೇ ಗ್ರಾಮ ಆಡಳಿತಾಧಿಕಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೆಲೆಸುವಂತೆ ಮಾಡಬೇಕು
ಜ್ಞಾನೋಬ ನಿಟ್ಟೂರೆ ಸಂಭಾಜಿ ಬ್ರಿಗೇಡ್ ತಾಲ್ಲೂಕು ಅಧ್ಯಕ್ಷ
ಗ್ರಾಮದಲ್ಲಿಯೇ ವಾಸವಿರುವಂತೆ ಪಿಡಿಒಗಳಿಗೆ ಸೂಚಿಸಬೇಕು. ಮನೆ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಿ ವಜಾಗೊಳಿಸಬೇಕು
ಕಾಳಿದಾಸ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತ 

7 ಪಿಡಿಒ ಹುದ್ದೆ; ಎರಡೇ ಭರ್ತಿ

ಹಳ್ಳಿಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಪಟ್ಟಣದಲ್ಲಿ ಕಾಲ ಕಳೆಯುತ್ತಿದ್ದಾರೆ. ತಾಲ್ಲೂಕಿನ ಕೊನೆಯ ಗ್ರಾಮಗಳಾದ ಮೀರಖಲ ಗಡಿರಾಯಪಳ್ಳಿ ಕಾದೇಪುರ ಗೋರಟಾ ಆನಂದವಾಡಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಲೆಕ್ಕಾಧಿಕಾರಿಗಳನ್ನು ಕಾಣಲು 15 ರಿಂದ 20 ಕಿ.ಮೀ ದೂರದ ತಹಸೀಲ್ದಾರ್ ಕಚೇರಿಗೆ ಹೋಗಬೇಕಾದ ಸ್ಥಿತಿಯಿದೆ. ತಾಲ್ಲೂಕಿನ 7 ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು ಪಿಡಿಒ ಇದ್ದಾರೆ. 5 ಪಿಡಿಒ ಹುದ್ದೆ ಖಾಲಿ ಇವೆ. ದ್ವಿತೀಯ ದರ್ಜೆಯ ಅಧಿಕಾರಿಗೆ ಪಿಡಿಒ ಜವಾಬ್ದಾರಿ ನೀಡಲಾಗಿದೆ. ಇನ್ನು ಕೆಲ ಕಡೆ ಒಬ್ಬ ಪಿಡಿಒಗೆ ಎರಡು ಪಂಚಾಯಿತಿ ಜವಾಬ್ದಾರಿ ವಹಿಸಲಾಗಿದ್ದು ಇವರು ಸಭೆ ತರಬೇತಿ ಕಾರ್ಯಕ್ರಮಗಳ ನೆಪ ಹೇಳಿ ಪಂಚಾಯಿತಿಯತ್ತ ಸುಳಿಯುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ ಪಿಡಿಒ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.