ಬೀದರ್: ‘ಹೆಚ್ಚಿನ ದರದಲ್ಲಿ ಮಾಸ್ಕ್ಗಳನ್ನು ಮಾರಾಟ ಮಾಡುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಎಚ್ಚರಿಕೆ ನೀಡಿದ್ದಾರೆ.
‘ಕೆಮ್ಮು, ನೆಗಡಿ, ಜ್ವರ ಇರುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಇದರಿಂದ ಅದು ಇತರರಿಗೆ ಹರಡುವುದಿಲ್ಲ. ಇನ್ನುಳಿದವರು ಕರವಸ್ತ್ರಗಳಿಂದ ಮೂಗು ಮುಚ್ಚಿಕೊಳ್ಳಬೇಕು. ಎರಡು ಕರವಸ್ತ್ರ ಇಟ್ಟುಕೊಳ್ಳಬೇಕು. ಒಂದು ಕರವಸ್ತವನ್ನು ಆರು ತಾಸು ಅವಧಿಗೆ ಮಾತ್ರ ಬಳಸಬೇಕು. ನಂತರ ಚೆನ್ನಾಗಿ ತೊಳೆದುಬಿಸಿಲಲ್ಲಿ ಒಣಗಿಸಬೇಕು’ ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಎನ್95 ಮಾಸ್ಕ್ನ್ನು ರೋಗಿಗಳು ಮಾತ್ರ ಬಳಸಬೇಕು. ಉಳಿದವರು ಮೂರು ಪದರಿನ ಮಾಸ್ಕ್ ಬಳಸಬೇಕು. ಎಂಟು ತಾಸುಗಳ ನಂತರ ವಿಲೇವಾರಿ ಮಾಡಬೇಕು. ಯಾವ ಕಾರಣಕ್ಕೂ ಮರು ಬಳಕೆ ಮಾಡಬಾರದು’ ಎಂದು ಹೇಳಿದರು.
‘ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿವಾಹಗಳನ್ನು ಸರಳವಾಗಿ ಮಾಡಬೇಕು. ವೈಭವಯುತ ಆಚರಣೆ ಕೈಬಿಡಬೇಕು ಎಂದು ಮನವಿ ಮಾಡಿದರು.
‘ಕೊರೊನಾ ಸೋಂಕಿನ ಚಿಕಿತ್ಸೆಗೆ ಈವರೆಗೆ ಯಾವುದೇ ಔಷಧಿ ಲಭ್ಯವಿಲ್ಲ. ಇದು ನಿಧಾನವಾಗಿ ಆವರಿಸಿಕೊಳ್ಳುತ್ತದೆ. ಮೊದಲು ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡು ನಿಧಾನವಾಗಿ ಅಂಗಾಂಗಗಳು ನಿಷ್ಕ್ರಿಯಗೊಳ್ಳುತ್ತದೆ. ಬಹುಅಂಗಾಂಗಳ ವೈಫಲ್ಯದಿಂದಾಗಿ ರೋಗಿ ಸಾವಿಗೀಡಾಗುತ್ತಾನೆ. ಹೀಗಾಗಿ ಎಚ್ಚರಿಕೆ ವಹಿಸಿದರೆ ಮಾತ್ರ ರೋಗ ನಿಯಂತ್ರಣ ಮಾಡಬಹುದು’ ಎಂದು ಡಾ.ಮಹೇಶ ತೊಂಡಾರೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.