
ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ಮೇಲೆ ತಾಲ್ಲೂಕು ಆಡಳಿತದಿಂದ ಶನಿವಾರ ದಾಳಿ ನಡೆಸಿ ಪರೀಶೀಲನೆ ಮಾಡಾಯಿತು.
ದಾಳಿ ಸಂದರ್ಭದಲ್ಲಿ ಕೆಲ ಕಾರ್ಖಾನೆಗಳಲ್ಲಿ ನಿಯಮ ಮೀರಿ ಅನಧಿಕೃತವಾಗಿ ನಡೆಯುತ್ತಿರುವ ಹಲವಾರು ಚಟುವಟಿಕೆಗಳು ಬೆಳಕಿಗೆ ಬಂದಿವೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಅನಧಿಕೃತ ಚಟುವಟಿಕೆಗಳು ಬಯಲಿಗೆ ಬರುವುದರಲ್ಲಿ ಸಂದೇಹವೇ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಗರಬತ್ತಿ , ದಾಲ್ ಮಿಲ್, ಅಳ್ಳು ತಯಾರಿಕೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದಾಗ ಅಳ್ಳು ಹಾಗೂ ಅಗರಬತ್ತಿ ಕಾರ್ಖಾನೆಳಲ್ಲಿ ಕೇವಲ ಕೆಮಿಕಲ್ ತುಂಬಿದ ಬ್ಯಾರಲ್ಗಳನ್ನು ಭಾರಿ ಸಂಖ್ಯೆಯಲ್ಲಿ ಸಂಗ್ರಹಿಟಿರುವುದು ಗಮನಕ್ಕೆ ಬಂತು. ದಾಲ್ ಮಿಲ್ನಲ್ಲಿ ಫರ್ನಿಚರ್ ಹಾಗೂ ಬೆಡ್ ತಯಾರಿಸುವ ಘಟಕ ಇರುವುದು ಬೆಳಕಿಗೆ ಬಂದಿತು.
ತಹಶೀಲ್ದಾರ್ ಅಂಜುಂ ತಬಸುಮ್ ಹಾಗೂ ಡಿವೈಎಸ್ಪಿ ಮಡೋಳಪ್ಪ ಅವರು ಕೈಗಾರಿಕಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ‘ಇಲ್ಲಿ ಹಲವಾರು ಅವಘಡಗಳು ಸಂಭವಿಸುತ್ತಿದ್ದು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದರೂ ಹಲವಾರು ವರ್ಷಗಳಿಂದ ಇಲ್ಲಿಯ ಕಾರ್ಖಾನೆಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಎಚ್ಚರಿಕೆ ವಹಿಸಿ ಪರಿಶೀಲನೆ ನಡೆಸಬೇಕಾಗಿತ್ತು. ಅವರ ನಿರ್ಲಕ್ಷ್ಯವೇ ಈ ಚಟುವಟಿಕೆ ನಡೆಯಲು ಕಾರಣ. ಅನಧಿಕೃತವಾಗಿ ಕೋರ್ ಕೆಮಿಕಲ್ ಕಂಪನಿಗೆ ಸಂಬಂಧಿಸಿದ ಕೆಮಿಕಲ್ ವಸ್ತುಗಳನ್ನು ಸಂಗ್ರಹಿಸಲಾಗಿರುವುದು ಕಾನೂನು ಬಾಹಿರವಾಗಿಲ್ಲವೇ’ ಎಂದು ಪ್ರಶ್ನಿಸಿದರು. ಎಲ್ಲಾ ಕಾರ್ಖಾನೆಗಳನ್ನು ತಪಾಸಣೆ ನಡೆಸಿ ನಿಯಮ ಉಲ್ಲಂಘಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.
ದಾಳಿ ಸಂದರ್ಭದಲ್ಲಿ ಕೆಲ ಕಾರ್ಖಾನೆಗಳಲ್ಲಿ ನಿಯಮ ಬಾಹಿರವಾಗಿ ಚಟುವಟಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಒಂದು ವಾರದ ಒಳಗಾಗಿ ಎಲ್ಲಾ ಕಾರ್ಖಾನೆಗಳ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸಣ್ಣ ಹಾಗೂ ಬೃಹತ್ ಕೈಗಾರಿಕೆ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ನೀಡದಿದ್ದಲಿ ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ತಾ.ಪಂ ಇಒ ದೀಪಿಕಾ ನಾಯ್ಕರ್, ಪರಿಸರ ಮಾಲಿನ್ಯ ಅಧಿಕಾರಿ ಮೃತ್ಯುಂಜಯ, ಕಾರ್ಮಿಕ ಅಧಿಕಾರಿ ರಾಹುಲ್ ಸೇರಿದಂತೆ ಸಣ್ಣ ಹಾಗೂ ಬೃಹತ್ ಕೈಗಾರಿಕೆ ಇಲಾಖೆ, ಜೆಸ್ಕಾಂ, ಅಗ್ನಿಶಾಮಕ ದಳ ಅಧಿಕಾರಿಗಳು ಇದ್ದರು.
ಎರಡು ದಿನಗಳಲ್ಲಿ ಸುಮಾರು 30 ಕಾರ್ಖಾನೆಗಳ ಪರೀಶೀಲನೆ ನಡೆಸಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಮಡೋಳಪ್ಪ ಡಿವೈಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.