ಬೀದರ್: ಬೀದರ್-ಔರಾದ್ ಹಾಗೂ ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಡಿ.19ರಂದು ನವದೆಹಲಿಯಿಂದ ವರ್ಚುವಲ್ ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 161(ಎ)ರ 52 ಕಿ.ಮೀ. ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರೆತಿದೆ. ₹335 ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಹೆದ್ದಾರಿ ಟೆಂಡರ್ ಪ್ರಕ್ರಿಯೆ ಜುಲೈ 1ಕ್ಕೆ ಮುಗಿದು ಅರ್ಹ ಕಂಪನಿಗೆ ಕಾಮಗಾರಿ ಸಿಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಟೆಂಡರ್ನಿಂದ ಹೊರಗಿಡಲಾಗಿದ್ದ ಹೈದರಾಬಾದ್ನ ಟ್ರ್ಯಾಕ್ ಆ್ಯಂಡ್ ಟವರ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದೆಹಲಿ ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿತ್ತು ಎಂದು ತಿಳಿಸಿದ್ದಾರೆ. ಹೈಕೋರ್ಟ್ ಕಂಪನಿಯ ಅರ್ಜಿ ತಿರಸ್ಕರಿಸಿದ್ದು, ಸರ್ಕಾರದ ಪರವಾಗಿ ತೀರ್ಪು ನೀಡಿದೆ.
ಹೆದ್ದಾರಿ ವಿಚಾರದಲ್ಲಿ ಸರ್ಕಾರಕ್ಕೆ ಗೆಲುವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣ
ಬೀದರ್: ತಾಲ್ಲೂಕಿನ ಭಂಗೂರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲ್ಸೇತುವೆ ಜನವರಿ 15ರಿಂದ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಪಕ್ಕದ ಸರ್ವೀಸ್ ರಸ್ತೆ ಹಾಗೂ ಉಳಿದ ಕಾಮಗಾರಿಗಳೂ ಏಪ್ರಿಲ್ ಒಳಗೆ ಪೂರ್ಣಗೊಳ್ಳಲಿವೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಭಂಗೂರನಿಂದ ಬಸವಕಲ್ಯಾಣ ತಾಲ್ಲೂಕಿನ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗಿದೆ. ಹೆದ್ದಾರಿಯ ಅಪಘಾತ ವಲಯಗಳಲ್ಲಿ ಟ್ರಾನ್ಸ್ಫಾರ್ಮರ್ ಬಾರ್ ಮಾರ್ಕಿಂಗ್ ಅಳವಡಿಸಲು ಸೂಚಿಸಲಾಗಿದೆ. ಮನ್ನಾಎಖ್ಖೆಳ್ಳಿ-ಬೋರಾಳ ರಸ್ತೆ ಮಧ್ಯೆ ಹೊಸ ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಹುಮನಾಬಾದ್ ಬೈಪಾಸ್ ಹತ್ತಿರ ಯುನಿ ಡೈರೆಕ್ಶನಲ್ ಫ್ಲೈಒವರ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ದೇಶನ ಕೊಡಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.