ADVERTISEMENT

ರಾಜ್ಯದಲ್ಲಿ ಸರ್ಕಾರ ಟೈಟ್‌ ಇಲ್ಲ: ಬಂಡೆಪ್ಪ ಕಾಶೆಂಪುರ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 16:25 IST
Last Updated 1 ಜೂನ್ 2024, 16:25 IST
ಬಂಡೆಪ್ಪ ಕಾಶೆಂಪುರ್‌
ಬಂಡೆಪ್ಪ ಕಾಶೆಂಪುರ್‌   

ಬೀದರ್‌: ‘ರಾಜ್ಯದಲ್ಲಿ ಸರ್ಕಾರ ಟೈಟ್‌ ಇಲ್ಲ. ಭಯ ಭೀತಿ ಇಲ್ಲದೆ ರಾಜ್ಯದೊಳಗೆ ನಡೆಯುತ್ತಿರುವ ದುಷ್ಕೃತ್ಯಗಳೇ ಇದಕ್ಕೆ ಸಾಕ್ಷಿ’ ಎಂದು ಜೆಡಿಎಸ್‌ ಮುಖಂಡರೂ ಆದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಆರೋಪಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಟೈಟ್‌ ಇದ್ದರೆ ಆಡಳಿತ, ಕಾನೂನು ಸುವ್ಯವಸ್ಥೆ ಚೆನ್ನಾಗಿರುತ್ತದೆ. ರಾಜ್ಯದಲ್ಲಿ ನಿತ್ಯ ಅಹಿತಕರ ಘಟನೆಗಳು ಜರುಗುತ್ತಿವೆ. ಅವುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿಯವರು ಪುನಃ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯದಲ್ಲಿ ಹಿಂದಿನ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ ಹೆಚ್ಚಿನ ವ್ಯತ್ಯಾಸಗಳೇನೂ ಆಗುವುದಿಲ್ಲ. ಒಂದೆರೆಡು ಸೀಟುಗಳು ಆಚೆ, ಈಚೆ ಆಗಬಹುದು ಎಂದು ಅಭಿಪ್ರಾಯ ಪಟ್ಟರು.

ADVERTISEMENT

ರಾಜ್ಯದಲ್ಲಿ ಎಸ್ಟಿ ನಿಗಮದಲ್ಲಿ ಆಗಿರುವ ಅವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಸಂದೇಹವಿದೆ. ಸಿಐಡಿ ನಡೆಸುತ್ತಿದ್ದ ತನಿಖೆಯನ್ನು ಎಸ್‌ಐಟಿಗೆ ಕೊಟ್ಟಿರುವುದೇಕೆ? ಸಿಐಡಿ ಮೇಲೆ ನಂಬಿಕೆ ಇಲ್ಲವೇ? ಎಸ್ಪಿ ನಿಗಮದ ಅನುದಾನ ತೆಲಂಗಾಣ ರಾಜ್ಯಕ್ಕೆ ಹೋಗಿರುವುದು ಏಕೆ ಎಂದು ಪ್ರಶ್ನಿಸಿದರು.

ತನಿಖೆ, ವಿಚಾರಣೆ ನೆಪದಲ್ಲಿ ಸರ್ಕಾರ ಕಾಲಹರಣ ಮಾಡಬಾರದು. ಈ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್ಟಿ ನಿಗಮದಲ್ಲಿನ ಭ್ರಷ್ಟಾಚಾರದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ, ಎಚ್.ಡಿ. ರೇವಣ್ಣರ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ‌. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಜೊತೆಗೆ ಕಬಿನಿಗೆ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ.ರೇವಣ್ಣ, ಕುಮಾರಣ್ಣನವರ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ಅವರೆಲ್ಲ ಅಣ್ಣ - ತಮ್ಮಂದಿರು ಚೆನ್ನಾಗಿದ್ದಾರೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.