ಹುಮನಾಬಾದ್: ‘ಪ್ಲಾಸ್ಟಿಕ್ ಉಪಯೋಗಿಸುವುದನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಕೈಚೀಲಗಳನ್ನು ಬಳಕೆ ಮಾಡಬೇಕು’ ಎಂದು ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಧುಮ್ಮನಸೂರ್ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ‘ಪ್ಲಾಸ್ಟಿಕ್ ಮುಕ್ತ ಆಗಬೇಕು. ಪ್ಲಾಸ್ಟಿಕ್ ಬೇಡ ಪ್ರಕೃತಿ ಬೇಕು’ ಅಭಿಯಾನದಲ್ಲಿ ಅವರು ಮಾತನಾಡಿದರು. ಧುಮ್ಮನಸೂರ್ ಗ್ರಾಮ ಪಂಚಾಯಿತಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಮುಂದಾಗಿರುವುದು ಉತ್ತಮ ವಿಚಾರ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿದ ಪದಾರ್ಥಗಳ ಬಳಕೆ ಕಡಿಮೆ ಮಾಡಬೇಕು. ಯಾವುದೇ ವಸ್ತುಗಳನ್ನು ಕೊಂಡು ತರಲು ಬಟ್ಟೆ ಬ್ಯಾಗ್ ಬಳಸಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ದೀಪಿಕಾ ಮಾತನಾಡಿ, ‘ಪ್ಲಾಸ್ಟಿಕ್ ಬಳಕೆ ಅನೈರ್ಮಲ್ಯಕ್ಕೆ ಕಾರಣ. ಅಲ್ಲದೇ ಪ್ಲಾಸ್ಟಿಕ್ ಬಳಕೆ ಜನ, ಜಾನುವಾರುಗಳು, ವನ್ಯಜೀವಿಗಳು ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ಈ ಬಗ್ಗೆ ಗ್ರಾಮಸ್ಥರು ಜಾಗೃತರಾಗಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಪ್ಪ ಧುಮ್ಮನಸೂರ್ ಮಾತನಾಡಿ, ‘ಗ್ರಾಮದಲ್ಲಿ ಸ್ವ-ಇಚ್ಛೆಯಿಂದ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ನಮ್ಮ ದೈನಂದಿನ ಬದುಕಿನಲ್ಲಿ ವಾಡಿಕೆ ಆಗಿ ಹೋಗಿದೆ. ಇದರ ಬಳಕೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ ಸಂಗೋಳಗಿ, ಸದಸ್ಯ ಸಂಜು ಕುಮಾರ್ ಕಿಣ್ಣಿ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಜಗನ್ನಾಥ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಾಗರ್, ಮಲ್ಪಪ್ಪ ಸೋನದ್, ಶಿವರಾಜ ಮಂಗಲಗಿಕರ್, ಪ್ರಭು ದುಬಲಗುಂಡಿ, ರಘುನಾಥ ಘಂಟೆ, ನಾಗಯ್ಯಸ್ವಾಮಿ, ರಮೇಶ ಬಗದಲ್ಕಕರ್, ಜ್ಞಾನದೇವ ಬಾಜಿ, ಜಾಫರ್, ಓಂಕಾರ ಖಂಡ್ರೆ, ಸಂಗೀತಾ ನಿಂಬೂರೆ, ಬಸವರಾಜ, ಶಿವರಾಜ್ ಮೇತ್ರೆ, ಸೇರಿದಂತೆ ಇತರರು ಹಾಜರಿದ್ದರು.
ಬೀದರ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕುಗಿರೀಶ್ ಬದೋಲೆ ಜಿಪಂ ಸಿಇಒ
ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಪಂಚಾಯಿತಿ ವತಿಯಿಂದ ಗ್ರಾಮದ ಪ್ರತಿ ಮನೆಗೂ ಬಟ್ಟೆ ಚೀಲಗಳನ್ನು ವಿತರಿಸುತ್ತಿದ್ದೇವೆವೀರಪ್ಪ ಧುಮ್ಮನಸೂರ್ ಗ್ರಾ.ಪಂ. ಅಧ್ಯಕ್ಷ
ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಶಾಲೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆಮಲ್ಲಿಕಾರ್ಜುನ ಧುಮ್ಮನಸೂರ್ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.