ಬಸವಕಲ್ಯಾಣ: ನಗರದ ಸಸ್ತಾಪುರ ರಸ್ತೆಯಲ್ಲಿನ ಬಸವ ಮಹಾಮನೆ ಆವರಣದಲ್ಲಿ ಅಕ್ಟೋಬರ್ 10, 11 ಮತ್ತು 12ರಂದು ಜರುಗಲಿರುವ 24ನೇ ಕಲ್ಯಾಣ ಪರ್ವಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನು ಹಾಗೂ ಬ್ಯಾನರ್, ಪ್ಲೆಕ್ಸ್ ಅಳವಡಿಸಲಾಗಿದೆ.
108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಎದುರಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಯಲ್ಲಿ ಬಸವಣ್ಣನವರ ವಚನಗಳನ್ನು ಬರೆದ ಪಟಗಳನ್ನು ಅಳವಡಿಸಲಾಗಿದೆ. ದಕ್ಷಿಣ ಭಾಗದ ಬೃಹತ್ ಮಂಟಪವನ್ನು ಸಿಂಗರಿಸಿ ವೇದಿಕೆ ನಿರ್ಮಿಸಲಾಗಿದೆ.
‘ಅಕ್ಟೋಬರ್ 10ರಂದು ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗಾರ್ಚನೆ, ನಂತರ 10.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುವುದು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಮತ್ತಿತರರು ಪಾಲ್ಗೊಳ್ಳುವರು' ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದ್ದಾರೆ.
‘ಅಕ್ಟೋಬರ್ 11ರಂದು ರಾಷ್ಟ್ರೀಯ ಬಸವದಳದ ಸಮಾವೇಶ ಮತ್ತು ಧರ್ಮಚಿಂತನಗೋಷ್ಠಿ ನೆರವೆರಲಿದೆ. ಅಕ್ಟೋಬರ್ 12 ರಂದು ಸಮಾಜಚಿಂತನಗೋಷ್ಠಿ ಮತ್ತು ಸಮಾರೋಪ ನಡೆಯುವುದು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.