
ಕಮಲನಗರ: ‘ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಚನ್ನಬಸವ ಪಟ್ಟದ್ದೇವರ ಶ್ರಮ ದೊಡ್ಡದು. ಸಮಾಜದಲ್ಲಿನ ಅಶಕ್ತರಿಗೆ ದಾಸೋಹದ ಜತೆಗೆ ಅನ್ನ ದಾಸೋಹವನ್ನು ಕರುಣಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ಚನ್ನಬಸವ ಪಟ್ಟದ್ದೇವರು ನಾಡಿನ ಶ್ರೇಷ್ಠ ಸಂತರು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಬಣ್ಣಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ನಿಮಿತ್ತ ಶುಕ್ರವಾರ ಬಸವಜ್ಯೋತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ ಮಾತನಾಡಿ, ‘ಜಾತಿ, ಧರ್ಮ ರಹಿತ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು 21ನೇ ಶತಮಾನದಲ್ಲಿ ಮುಂದುವರಿಸಿದ ಚನ್ನಬಸವ ಪಟ್ಟದ್ದೇವರ ಜೀವನ ಅನುಕರಣೀಯ’ ಎಂದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ತೋರಿಕೆಗಾಗಿ ದಾಸೋಹ ಸೇವೆ ಮಾಡದೇ ಅಂತರಂಗದ ಆತ್ಮ ಶಾಂತಿಗಾಗಿ ದಾಸೋಹ ಮಾಡಬೇಕು. ಈ ಮೂಲಕ ಹಸಿದವರ ಹಸಿವನ್ನು ನೀಗಿಸುವ ಕೆಲಸವನ್ನು ನಿರಂತರವಾಗಿ ನಮ್ಮ ಜೀವಿತಾವಧಿವರೆಗೂ ಮಾಡಬೇಕು. ಡಾ.ಚನ್ನಬಸವ ಪಟ್ಟದ್ದೇವರಿಂದಲೇ ಕಮಲನಗರ ರಾಜ್ಯದಾದ್ಯಂತ ಹೆಸರು ಮಾಡಿದೆ’ ಎಂದರು.
ಖೇಡ್ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಮುಖಂಡ ಚನ್ನಬಸವ ಬಳತೆ, ಶಕುಂತಲಾ ಬೆಲ್ದಾಳೆ ಮಾತನಾಡಿದರು.
ಪಾದಯಾತ್ರೆಗೆ ಮಹಾರಾಷ್ಟ್ರ, ತೆಲಂಗಾಣ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.
ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಪ್ರಕಾಶ ಟೊಣ್ಣೆ, ಶಿವಕುಮಾರ ಝುಲ್ಪೆ, ನಿಜಲಿಂಗಪ್ಪ ಮಹಾಜನ, ರಾಚಪ್ಪ ಪಾಟೀಲ, ಮಡಿವಾಳಪ್ಪ ಮಹಾಜನ, ಪಿಡಿಒ ದಿಲೀಪ, ಪಿಎಸ್ಐ ನಂದಿನಿ, ಧನರಾಜ ಸೊಲ್ಲಾಪುರೆ, ಮಹಾದೇವ ಬಿರಾದಾರ, ಪ್ರೊ.ಎಸ್.ಎನ್.ಶಿವಣಕರ, ರಾಜಕುಮಾರ ಬಿರಾದಾರ, ಅವಿನಾಶ ಶಿವಣಕರ, ಸಂತೋಷ ಬಿರಾದಾರ, ಸುರೇಶ ಸೊಲ್ಲಾಪುರೆ ಇತರರಿದ್ದರು.
ಉಮಾಕಾಂತ ಮಹಾಜನ ಸ್ವಾಗತಿಸಿದರು. ಮಾದಪ್ಪ ಮಡಿವಾಳ ನಿರೂಪಿಸಿದರು.
ಪಾದಯಾತ್ರೆ: ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಕಮಲನಗರದಿಂದ ಆರಂಭಗೊಂಡು ಡಿಗ್ಗಿ, ಹೊಳಸಮುದ್ರ, ಸಾವಳಿ ಮೂಲಕ ಸಂಗಮ ಗ್ರಾಮ ತಲುಪಿ ವಾಸ್ತವ್ಯ ಮಾಡುವುದು. ಡಿ.13 ರಂದು ಆಳಂದಿ, ಡೋಣಗಾಪುರ ಮೂಲಕ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.