ಬೀದರ್: ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಶನಿವಾರ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೈನಿಕ ಶಾಲೆ ಹಾಗೂ ಪದವಿ ಕಾಲೇಜಿನ ಎನ್.ಸಿ.ಸಿ. ಘಟಕದಿಂದ ಕಾರ್ಗಿಲ್ ವಿಜಯ್ ದಿನದ ರಜತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು.
ಬಿ.ವಿ.ಬಿ ಶಾಲಾ – ಕಾಲೇಜುಗಳ ಸಂಚಾಲಕ ಡಾ. ರಜನೀಶ ಎಸ್. ವಾಲಿ, ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪ ಗೌರವ ಸಮರ್ಪಿಸಿದರು. ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕ ಬಿ.ಎಚ್.ಎಂ. ಸಂಜೀವಕುಮಾರ ಅವರನ್ನು ಸನ್ಮಾನಿಸಿದರು.
ಕಾಲೇಜಿನ ಪ್ರಾಂಶುಪಾಲ ಪಿ. ವಿಠ್ಠಲ ರಡ್ಡಿ ಅವರು, ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೆ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ರಕ್ಷಣೆ ಕೊಟ್ಟರೆ, ರೈತರು ನಮಗೆ ಅನ್ನ ಕೊಡುತ್ತಾರೆ. ಇವರಿಬ್ಬರನ್ನೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಕಾಲೇಜಿನ ಆವರಣದಲ್ಲಿ ಸುಸಜ್ಜಿತ ಸೈನಿಕ ಶಾಲೆ ಪ್ರಾರಂಭಿಸಲಾಗಿದೆ. ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಇದು ವರದಾನವಾಗಲಿದೆ ಎಂದು ತಿಳಿಸಿದರು.
ಉಪಪ್ರಾಂಶುಪಾಲ ಅನಿಲ್ ಕುಮಾರ್ ಆಣದೂರೆ, ಶಿಕ್ಷಕ ಜಗದೀಶ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೀಪಾ ರಾಗ, ಸಿಬ್ಬಂದಿ, ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಹಾಜರಿದ್ದರು. ಇದೇ ವೇಳೆ ಕಾರ್ಗಿಲ್ ಕದನದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.