
ಬೀದರ್: ತನ್ನ ಸುಮಧುರ ಕಂಠದಿಂದ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಗಾಯಕ ಮಡಿವಾಳಯ್ಯ ಶಿವಲಿಂಗಯ್ಯ ಸಾಲಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಅಲ್ಲೂರ ಗ್ರಾಮದವರಾದ ಮಡಿವಾಳಯ್ಯನವರು ರಾಜ್ಯದ ಹಲವೆಡೆಗಳಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ. ಅಸಂಖ್ಯ ಯುವಕ/ಯುವತಿಯರಿಗೆ ಸಂಗೀತ, ತಬಲಾ ವಾದನದ ಶಿಕ್ಷಣ ನೀಡಿದ್ದಾರೆ.
ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಗಣಪತಿ ಭಟ್ಟ ಹಾಸನಗಿ, ಪಂಡಿತ್ ಇಂದೂಧರ ನಿರೋಡಿ, ಪಂಡಿತ್ ರಾಜಶೇಖರ ಮನ್ಸೂರ ಸೇರಿದಂತೆ ಹಲವು ಖ್ಯಾತನಾಮ ವಿದ್ವಾಂಸರ ಸಂಗೀತ ಕಚೇರಿಗಳಿಗೆ ತಬಲಾ ವಾದನ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಿಡಿಒ ಆಗಿ ಕೆಲಸ ಮಾಡಿದ್ದಾರೆ.
ಗಾಯಕ ರಾಜೇಂದ್ರ ಪವಾರ್ ಬಳಿಕ ಮಡಿವಾಳಯ್ಯನವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದು ವಿಶೇಷ. 70 ವರ್ಷ ವಯಸ್ಸಿನ ಮಡಿವಾಳಯ್ಯನವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ಮೈಸೂರು, ಪಂಡಿತ್ ಕೆ.ಎಸ್.ಹಡಪದ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದಿವೆ. ರಾಜ್ಯೋತ್ಸವ ಪ್ರಶಸ್ತಿ ಅವರ ಹಿರಿಮೆ ಹೆಚ್ಚಿಸಿದೆ.
ಎಲೆಮರೆಕಾಯಿಯಂತೆ ತನ್ನ ಪಾಡಿಗೆ ತಾನು ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿರುವ ಮಡಿವಾಳಯ್ಯ ಸಾಲಿ ಅವರಿಗೆ ಪ್ರಶಸ್ತಿ ಸಂದಿರುವುದಕ್ಕೆ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಎಸ್.ವಿ. ಕಲ್ಮಠ, ಕರ್ನಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ ನಾನು ಕನಸು ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ.ಮಡಿವಾಳಯ್ಯ ಶಿವಲಿಂಗಯ್ಯ ಸಾಲಿ ಗಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.