ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದಲ್ಲಿ ಕಳೆದ ವರ್ಷದಿಂದ ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ನಲ್ಲಿಗೆ ಹನಿ ನೀರು ಸಹ ಬರುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಮರ್ಪಕವಾಗಿ ಕಾಮಗಾರಿ ನಡೆಯದಿರುವುದರಿಂದ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದು ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದೆ.
ಮೂರು ವರ್ಷ ಕಳೆದರೂ ಕಾಮಗಾರಿ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಯೋಜನೆಯಡಿ ಗ್ರಾಮದ ಕೆಲ ಓಣಿಗಳಲ್ಲಿ ಪೈಪ್ ಹಾಕಲಾಗಿದೆ. ಆದರೆ ಸಂಪರ್ಕ ಕೊಟ್ಟಿಲ್ಲ. ಇನ್ನು ಕೆಲವು ಕಡೆ ಸಂಪರ್ಕ ಕೊಟ್ಟರು ನೀರೆ ಬರುತ್ತಿಲ್ಲ .
ಗ್ರಾಮದಲ್ಲಿ ಕಾಮಗಾರಿ ಆರಂಭವಾದಾಗ ಅಗೆದು ಹಾಕಿದ ರಸ್ತೆಗಳನ್ನು ಪುನಃ ನಿರ್ಮಿಸಬೇಕು ಎಂಬ ನಿಯಮವಿದೆ. ಆದರೆ ಗುತ್ತಿಗೆದಾರರು ಎಲ್ಲೂ ಹೊಸ ರಸ್ತೆ ನಿರ್ಮಿಸಿಲ್ಲ. ಇದರಿಂದಾಗಿ ಪೈಪ್ ಹಾಕಲು ಕಿತ್ತ ರಸ್ತೆ ಹಾಗೆಯೇ ಉಳಿದುಕೊಂಡಿದ್ದು ರಸ್ತೆಗಳ ಮಧ್ಯೆ ನಿರಂತರವಾಗಿ ಗಲೀಜು ನೀರು ಹರಿಯುತ್ತಿದೆ.
ಗ್ರಾಮಸ್ಥರು ಬಳಕೆ ಮಾಡಿದ ಹೊಲಸು ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿದೆ. ಇಷ್ಟೆಲ್ಲ ಆವಾಂತರ ಆದರೂ ಕೂಡ ಗುತ್ತಿಗೆದಾರರು ಮಾತ್ರ ಕೆಲಸ ಮುಗಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
‘ಜಲಜೀವನ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕೆಲಸ ಇನ್ನೂ ಮುಗಿಯುತ್ತಿಲ್ಲ. ಹೀಗಾಗಿ ಪ್ರತಿ ದಿನ ಬೈಕ್ ಸವಾರರು, ವೃದ್ಧರು, ಮಕ್ಕಳು ಆತಂಕದಲ್ಲಿ ಓಡಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ನನೆಗುದಿಗೆ ಬಿದ್ದ ಕಾಮಗಾರಿ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಲು ದೂರವಾಣಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ.
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ತಕ್ಷಣ ಸರಿಪಡಿಸಬೇಕುಚಂದ್ರಕಾಂತ ತುಗಾಂವೆ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.