ADVERTISEMENT

ಬೆಳೆ ಸಂರಕ್ಷಣೆಗೆ ಹವಾಮಾನ ಬದಲಾವಣೆ ಅರಿಯಿರಿ: ಡಾ. ಸುನೀಲ್ ಕುಲಕರ್ಣಿ

ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸುನೀಲ್ ಕುಲಕರ್ಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 15:23 IST
Last Updated 22 ಜನವರಿ 2021, 15:23 IST
ಬೀದರ್‌ನ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ಬದಲಾಗುತ್ತಿರುವ ಹವಾಮಾನ ಹಾಗೂ ಭವಿಷ್ಯದಲ್ಲಿ ಸುಸ್ಥಿರ ಆಹಾರ ಉತ್ಪಾದನೆ ಜಾಗೃತಿ ಕಾರ್ಯಕ್ರಮವನ್ನು ಸಹ ಸಂಶೋಧನಾ ನಿರ್ದೇಶಕ ಡಾ. ಎಂ.ಎಂ. ದಾನೋಜಿ ಉದ್ಘಾಟಿಸಿದರು. ಡಾ. ಸುನೀಲ್ ಕುಲಕರ್ಣಿ, ಸೋಮಶೇಖರ ಬಿರಾದಾರ, ಡಾ. ಶೋಭಾರಾಣಿ ಇದ್ದರು
ಬೀದರ್‌ನ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ಬದಲಾಗುತ್ತಿರುವ ಹವಾಮಾನ ಹಾಗೂ ಭವಿಷ್ಯದಲ್ಲಿ ಸುಸ್ಥಿರ ಆಹಾರ ಉತ್ಪಾದನೆ ಜಾಗೃತಿ ಕಾರ್ಯಕ್ರಮವನ್ನು ಸಹ ಸಂಶೋಧನಾ ನಿರ್ದೇಶಕ ಡಾ. ಎಂ.ಎಂ. ದಾನೋಜಿ ಉದ್ಘಾಟಿಸಿದರು. ಡಾ. ಸುನೀಲ್ ಕುಲಕರ್ಣಿ, ಸೋಮಶೇಖರ ಬಿರಾದಾರ, ಡಾ. ಶೋಭಾರಾಣಿ ಇದ್ದರು   

ಬೀದರ್: ಬೆಳೆ ಸಂರಕ್ಷಣೆಗೆ ರೈತರು ಹವಾಮಾನದಲ್ಲಿ ಮೇಲಿಂದ ಮೇಲೆ ಆಗುವ ಬದಲಾವಣೆಗಳನ್ನು ಅರಿಯಬೇಕು ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲ್ ಕುಲಕರ್ಣಿ ಸಲಹೆ ಮಾಡಿದರು.

ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆ ಅಡಿಯಲ್ಲಿ ಇಲ್ಲಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬದಲಾಗುತ್ತಿರುವ ಹವಾಮಾನ ಹಾಗೂ ಭವಿಷ್ಯದಲ್ಲಿ ಸುಸ್ಥಿರ ಆಹಾರ ಉತ್ಪಾದನೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇಘದೂತ್ ಹಾಗೂ ಮೌಸಮ್ ಆ್ಯಪ್‍ಗಳ ಮೂಲಕ ರೈತರು ಮುಂದಿನ ಐದು ದಿನಗಳ ಹವಾಮಾನ ಹೇಗೆ ಇರಲಿದೆ ಎನ್ನುವ ಮಾಹಿತಿ ಪಡೆಯಬಹುದು. ಅದಕ್ಕೆ ಅನುಗುಣವಾಗಿ ಬೆಳೆಗಳ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬಹುದು. ಈ ಮೂಲಕ ಕೃಷಿಯಲ್ಲಿನ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದೆ. ಹೊಸ ಹೊಸ ಕೀಟ, ರೋಗಗಳು ಕಾಣಿಸಿಕೊಳ್ಳುತ್ತಿವೆ. ಪರಿಣಾಮವಾಗಿ, ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದರು.

ಕೃಷಿ ಸಂಶೋಧನಾ ಕೇಂದ್ರವು ಹವಾಮಾನ ಬದಲಾವಣೆಯಿಂದ ಆಗುವ ಹಾನಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ದಿಸೆಯಲ್ಲಿ ರೈತರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದೆ ಎಂದು ತಿಳಿಸಿದರು.

ಕೃಷಿ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಎಂ.ಎಂ. ದಾನೋಜಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ., ವಿಜ್ಞಾನಿಗಳಾದ ಡಾ. ಆರ್.ಎಲ್. ಜಾಧವ್, ಡಾ. ಶೋಭಾರಾಣಿ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಸಿದ್ರಾಮಪ್ಪ, ಡಾ. ಜ್ಞಾನದೇವ ಬಿ., ಬಸವರಾಜ ಬಿರಾದಾರ ಇದ್ದರು. ಡಾ. ನಾರಾಯಣ ಹೆಬ್ಬಾಳ ಸ್ವಾಗತಿಸಿದರು. ಕೈಲಾಸ ನಿರೂಪಿಸಿದರು. ಭಾಗ್ಯಾ ಎಂ. ವಂದಿಸಿದರು.

ಕೃಷಿ ಸಂಶೋಧನಾ ಕೇಂದ್ರ ಹಾಗೂ ಭಾರತ ಹವಾಮಾನ ವಿಭಾಗದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.