
ಕಮಲನಗರ: ಸಾರ್ವಜನಿಕರು ಜವಾಬ್ದಾರಿ ಅರಿತುಕೊಂಡು ಕೊರೊನಾ ತಡೆಗೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಮಲನಗರ ಪಿಎಸ್ಐ ನಂದಿನಿ ಎಸ್. ತಿಳಿಸಿದರು.
ತಾಲ್ಲೂಕಿನ ಕಮಲನಗರ ಪಟ್ಟಣ, ಸೋನಾಳ, ಸೋನಾಳವಾಡಿ, ಹುಲಸೂರು, ಚಂದನವಾಡಿ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಕೊರೊನಾ ವಾರಿಯರ್ಸ್ಗಳು ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ನಿರಂತರವಾಗಿ ಪರಿಶ್ರಮ ಪಡುತ್ತಿದ್ದಾರೆ. ಹಗಲಿರುಳೆನ್ನದೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರೆಲ್ಲರ ಕಾರ್ಯ ಶ್ಲಾಘನೀಯ ಎಂದರು.
ಪಿಡಿಒ ಧೋಂಡಿಬಾ ಬಾಮಣೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಅಲಬಿದೆ, ಡಿಇಒ ಅಂಕುಶ, ಗಣಪತಿ, ರಾಜಕುಮಾರ, ಎಎಸ್ಐ ಚಿದಾನಂದ ಮಠ, ದತ್ತಾ, ಉಮಾಜಿ, ಎಸ್ಬಿ ರಾಜಕುಮಾರ ಸೋನಾರೆ, ವೈಜನಾಥ, ಪರಶುರಾಮ, ಸಂತೋಷ ಕಪಲಾಪುರೆ, ಮಲ್ಲಿಕಾರ್ಜುನ ಇದ್ದರು.
ಕೋವಿಡ್ ಜಾಗೃತಿ ಕೊರೊನಾ: ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರೂ ಮನೆಯಲ್ಲಿಯೇ ಉಳಿಯಬೇಕು. ಅಗತ್ಯವಿದ್ದಾಗ ಮಾಸ್ಕ್ ಧರಿಸಿ ಹೊರಬಂದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಯುವಮುಖಂಡ ಅರುಣ ಪಾಟೀಲ ಹೇಳಿದರು.
ತಾಲ್ಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಗುರುವಾರ ಕೋವಿಡ್ ಜನ ಜಾಗೃತಿ ಮೂಡಿಸುವ ಜೊತೆ ಉಚಿತ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ದಿನೇಶ ಪಾಟೀಲ, ಬಾಲಾಜಿ ಪಾಟೀಲ, ರೋಹಿತ ಧನಾಶ್ರೀ, ಶಿವಕುಮಾರ ಬೆಳವಡಿಗೆ, ಸಂಜು ಬಿರಾದಾರ ಇದ್ದರು.
ಜನ ಸಂಚಾರ ಸ್ತಬ್ಧ
ಬಸವಕಲ್ಯಾಣ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಕೈಗೊಂಡಿರುವ ನಿಯಮಗಳಿಗೆ ಇಲ್ಲಿ ಶುಕ್ರವಾರವೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಖ್ಯ ಮಾರುಕಟ್ಟೆ ಒಳಗೊಂಡು ಎಲ್ಲೆಡೆಯ ಅಂಗಡಿಗಳು ಬಂದ್ ಇದ್ದವು.
ಬೆಳಿಗ್ಗೆ 10 ಗಂಟೆಯವರೆಗೆ ಕಿರಾಣಿ, ಮೆಡಿಕಲ್ ಒಳಗೊಂಡು ಅಗತ್ಯ ವಸ್ತುಗಳ ಅಂಗಡಿಗಳಷ್ಟೇ ತೆರೆದಿದ್ದವು. ಹೋಟಲ್ಗಳಲ್ಲಿ ಊಟ, ಉಪಾಹಾರದ ಪಾರ್ಸೆಲ್ ನೀಡಲಾಯಿತು. ಆದರೂ ಸಣ್ಣಪುಟ್ಟ ಚಹಾ ಅಂಗಡಿಗಳು, ಪಾನ್ಬೀಡಾ ಡಬ್ಬಾಗಳು ಮಾತ್ರ ಸಂಪೂರ್ಣ ಬಂದ್ ಇದ್ದವು.
ಬಸ್ ಹಾಗೂ ಇತರೆ ವಾಹನಗಳ ಸಂಚಾರ ನಿಷೇಧಿಸಿದ ಕಾರಣ ಅಗತ್ಯ ಇದ್ದವರು ಮಾತ್ರ ವಾಹನ ತೆಗೆದುಕೊಂಡು ಹೋದರು. ಹೀಗಾಗಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಮುಖ್ಯ ರಸ್ತೆ ಹಾಗೂ ಇತರೆ ರಸ್ತೆಗಳು ಕೂಡ ಶುಕ್ರವಾರ ಓಡಾಡುವ ಜನರೇ ಇಲ್ಲದೇ ಬಿಕೋ ಎನ್ನುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.