
ಬೀದರ್: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ಎಲ್) ಭೀಮರಾಯನಗುಡಿ ಕಾಲುವೆ ವಲಯ–1ರ ಮುಖ್ಯ ಎಂಜಿನಿಯರ್ ಪ್ರೇಮ್ ಸಿಂಗ್ ರಾಠೋಡ್ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಅವರ ಒಟ್ಟು ಸೇವಾವಧಿಯಲ್ಲಿ ಗಳಿಸಿದ ಆಸ್ತಿಗಿಂತ 200 ಪಟ್ಟು ಅಧಿಕ ಆಸ್ತಿ ದಾಳಿ ವೇಳೆ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಬೀದರ್ನ ಶಿವನಗರ ದಕ್ಷಿಣದ ಮನೆ, ಬೀದರ್ ತಾಲ್ಲೂಕಿನ ಬಗದಲ್ ತಾಂಡಾದ ಫಾರ್ಮ್ ಹೌಸ್, ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯ ಮನೆ ಹಾಗೂ ಕಚೇರಿಯಲ್ಲಿ ಶೋಧ ಕೈಗೊಳ್ಳಲಾಗಿದೆ.
ಬೀದರ್ನ ಶಿವನಗರ ದಕ್ಷಿಣದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮನೆ, ಬೀದರ್ ತಾಲ್ಲೂಕಿನ ಬಗದಲ್ ತಾಂಡಾ ಸಮೀಪ 20 ಎಕರೆ ಜಮೀನು, ₹50 ಲಕ್ಷದ ಠೇವಣಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹50 ಲಕ್ಷ, ಬೀದರ್ ಹಾಗೂ ತೆಲಂಗಾಣದ ಜಹೀರಾಬಾದ್ನಲ್ಲಿ ಒಟ್ಟು ನಾಲ್ಕು ನಿವೇಶನಗಳಿರುವುದು ಕಾರ್ಯಾಚರಣೆಯಿಂದ ಗೊತ್ತಾಗಿದೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ., ಬೀದರ್ ಡಿವೈಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.