ಬೀದರ್: ‘ನನ್ನ ಭಾಷೆ ಬಂಜಾರ ಇರಬಹುದು. ಆದರೆ, ನನ್ನ ನರನಾಡಿಗಳಲ್ಲಿ ಕನ್ನಡದ ರಕ್ತ ಹರಿಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.
ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆರಂಭವಾದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾನು ಜನಿಸಿದ್ದು ಔರಾದ್ ತಾಲ್ಲೂಕಿನ ಗಡಿ ಗ್ರಾಮದಲ್ಲಿ. 1979ರಲ್ಲಿ ಗ್ರಾಮದಲ್ಲಿ ಕನ್ನಡ ಶಾಲೆಯೇ ಇರಲಿಲ್ಲ. ಹೀಗಾಗಿ ಮರಾಠಿ ಕಲಿಯಬೇಕಾಯಿತು. ದಾಬಕಾ ಹೋಬಳಿಯ 65 ಗ್ರಾಮಗಳಲ್ಲಿ ಕನ್ನಡ ಶಿಕ್ಷಕರೇ ಇರಲಿಲ್ಲ. ನಾನು ಶಾಸಕನಾದ ಮೇಲೆ ಎಲ್ಲ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕವಾಗುವಂತೆ ನೋಡಿಕೊಂಡಿದ್ದೇನೆ’ ಎಂದರು.
‘1987ರಲ್ಲಿ ಹೊಟ್ಟೆ ಪಾಡಿಗಾಗಿ ಮುಂಬೈಗೆ ಹೋಗಿದ್ದೆ. ಕನ್ನಡ ಓದಲು, ಬರೆಯಲು ಕಲಿಯುತ್ತಿದ್ದೇನೆ. ನನಗೆ ಸರಿಯಾಗಿ ಕನ್ನಡ ಬರುವುದಿಲ್ಲ ಎಂದು ಎಷ್ಟೇ ಚುಚ್ಚು ಮಾತನಾಡಿದರೂ, ಇದೇ ಕಾರಣಕ್ಕೆ ನನ್ನನ್ನು ನೇಣಿಗೇರಿಸಿದರೂ ನಾನು ಕನ್ನಡಿಗನೇ ಆಗಿದ್ದೇನೆ. ಕನ್ನಡ ಮಾತೆಯ ಋಣ ತೀರಿಸಲು ಶಕ್ತಿಮೀರಿ ಪ್ರಯತ್ನಿಸುವೆ’ ಎಂದು ಹೇಳಿದರು.
‘ಜಿಲ್ಲೆಯ ಅಭಿವೃದ್ಧಿಗೆ ಹುಮ್ಮಸ್ಸಿನಿಂದ ಕೆಲಸ ಮಾಡುವೆ. ಕನ್ನಡದ ಎಲ್ಲ ಕೆಲಸಗಳನ್ನು ಕಾಳಜಿ ವಹಿಸಿ ಮಾಡುವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.