ಬೀದರ್: ರಾಷ್ಟ್ರೀಯ ಮತದಾರರ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮಾರ್ಚ್ 31ರ ವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಹೀರಾ ನಸೀಮ್ ತಿಳಿಸಿದ್ದಾರೆ.
ಭಾರತದ ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮದ ಮೂಲಕ ನಡೆಸಲಿರುವ ಸ್ಪರ್ಧೆಗಳಲ್ಲಿ ಎಲ್ಲ ವಯೋಮಾನದವರೂ ಭಾಗವಹಿಸಬಹುದಾಗಿದೆ.
‘ನನ್ನ ಮತ ನನ್ನ ಭವಿಷ್ಯ’ ‘ಒಂದು ಮತದ ಶಕ್ತಿ’ ಘೋಷವಾಕ್ಯದೊಂದಿಗೆ ಸೃಜನಶೀಲ ಅಭಿವ್ಯಕ್ತಿಯ ಮೂಲಕ ಪ್ರತಿ ಮತದ ಮಹತ್ವವನ್ನು ತಿಳಿಸಬೇಕು. ರಸಪ್ರಶ್ನೆ, ವಿಡಿಯೊ ತಯಾರಿಕೆ, ಗಾಯನ ಸ್ಪರ್ಧೆ, ಭಿತ್ತಿಚಿತ್ರ ರಚನೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳು ಆನ್ಲೈನ್ ಮೂಲಕ ನಡೆಯಲಿದೆ. ಸ್ಪರ್ಧಿಗಳು voter-contesteci.gov.in ಗೆ ತಮ್ಮ ನಮೂನೆಗಳನ್ನು ಕಳುಹಿಸಬಹುದು. ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ, ಇ ಪ್ರಮಾಣ ಪತ್ರ ಹಾಗೂ ವಸ್ತುರೂಪದ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.