
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ನೀಲಕಂಠ ರಾಠೋಡ, ಇಒ ರಮೇಶ ಸುಲ್ಫಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು
ಬಸವಕಲ್ಯಾಣ: ರಾತ್ರಿ ನಗರದಿಂದ ಹುಮನಾಬಾದ್ ಮೂಲಕ ಕಲಬುರಗಿಗೆ ಹೋಗಿ ಬರುವುದಕ್ಕೆ ಬಸ್ ಸಂಚಾರ ಇಲ್ಲದೆ ಜನರು ಪರದಾಡುತ್ತಿರುವ ಬಗ್ಗೆ ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ, ರಾತ್ರಿ 8 ಮತ್ತು 10 ಗಂಟೆಯ ಮಧ್ಯದಲ್ಲಿ ಈ ಮಾರ್ಗದಲ್ಲಿ ಬಸ್ ಸಂಚರಿಸುವಂತೆ ಕ್ರಮ ತೆಗದುಕೊಳ್ಳಬೇಕು ಎಂದು ಸಂಬಂಧಿತರಿಗೆ ಸಲಹೆ ನೀಡಿದರು. ಎಸ್ಪಿಟಿಪಿ ಯೋಜನೆ ಅಡಿಯಲ್ಲಿ ತಾಂಡಾಗಳಲ್ಲಿ ಜೆಸ್ಕಾಂ ಇಲಾಖೆಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಬಟಗೇರಾ ಗ್ರಾಮದಲ್ಲಿ ಜೆಸ್ಕಾಂದಿಂದ ಲೈನ್ ಮ್ಯಾನ್ ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು.
ಯುವನಿಧಿ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು. ಪಡಿತರ ಅಂಗಡಿಗಳಲ್ಲಿನ ವ್ಯವಸ್ಥೆ ಸರಿಪಡಿಸಬೇಕು. ಆಹಾರಧಾನ್ಯ ಅರ್ಹರಿಗೆ ತಲುಪಿಸಬೇಕು. ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಡೆಯಬೇಕು ಎಂದರು.
ಇಒ ರಮೇಶ ಸುಲ್ಫಿ ಮಾತನಾಡಿ, ಪಡಿತರ ವಿತರಣೆ ಅಂಗಡಿಗಳಲ್ಲಿ ಗ್ಯಾರಂಟಿ ಯೋಜನೆಗಳ ಮಾಹಿತಿಯುಳ್ಳ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಸಮಿತಿ ಸದಸ್ಯರಾದ ಕುತ್ಬುದ್ದೀನ್, ಪ್ರೀತೀಶ ಮುಳೆ, ಯುವರಾಜ, ದಶರಥ ಶಿವಪ್ಪ, ಸಂಜೀವಕುಮಾರ, ಅನಿಲ, ಮನೋಹರ, ದಿನೇಶ, ಮಾಧವ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.