ದೋಣಿಗೆ ಬೆಂಕಿ ಹಚ್ಚಿರುವ ದೃಶ್ಯ
ಹುಲಸೂರ (ಬೀದರ್ ಜಿಲ್ಲೆ): ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರಚಾಲಿತ ದೋಣಿಯನ್ನು ಜಪ್ತಿ ಮಾಡಿ, ಅದಕ್ಕೆ ಬೆಂಕಿ ಹಚ್ಚಿ ಅಧಿಕಾರಿಗಳು ನಾಶಪಡಿಸಿದ್ದಾರೆ.
'ಮರಳು ಅಕ್ರಮ ಗಣಿಗಾರಿಕೆ; ಬೀಳದ ಕಡಿವಾಣ' ಶೀರ್ಷಿಕೆ ಅಡಿ ಫೆ. 5ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಸಿಪಿಐ ಗುರುನಾಥ ಬಿರಾದಾರ, ಉಪ ತಹಶೀಲ್ದಾರ್ ಸುನೀಲಕುಮಾರ ಸಜ್ಜನ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಧನರಾಜ ಅವರ ನೇತೃತ್ವದ ತಂಡ ಗುರುವಾರ ಮಾಂಜ್ರಾ ನದಿಗೆ ಭೇಟಿ ಕೊಟ್ಟು, ಯಂತ್ರಚಾಲಿತ ದೋಣಿ ಜಪ್ತಿ ಮಾಡಿ, ಅದಕ್ಕೆ ಬೆಂಕಿ ಹಚ್ಚಿ ನಾಶಗೊಳಿಸಿದ್ದಾರೆ.
ಸಿಪಿಐ ಗುರುನಾಥ ಬಿರಾದಾರ ಮಾತನಾಡಿ, ‘ಪ್ರಜಾವಾಣಿ’ ವರದಿ ಹಾಗೂ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾರಾದರೂ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡರೆ ಅಂತಹವರ ಬಗ್ಗೆ ಮಾಹಿತಿ ನೀಡಿ, ಪೊಲೀಸರಿಗೆ ಸಹಕಾರ ಕೊಡಬೇಕೆಂದು ಕೋರಿದ್ದಾರೆ.
ಭೂ ವಿಜ್ಞಾನಿ ಧನರಾಜ್ ಬಲ್ಲೂರಕರ, ಪಿಎಸ್ಐ ಶಿವಕುಮಾರ ಬಳತೆ, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಮಹಾಂತೇಶ್, ಶ್ರೀಶೈಲ ಗಿರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.