ADVERTISEMENT

ಈರುಳ್ಳಿ ಬೆಲೆ ಸ್ಥಿರ, ಹಿಗ್ಗಿದ ಹಿರೇಕಾಯಿ

ಚಂದ್ರಕಾಂತ ಮಸಾನಿ
Published 19 ಸೆಪ್ಟೆಂಬರ್ 2020, 19:30 IST
Last Updated 19 ಸೆಪ್ಟೆಂಬರ್ 2020, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ಅತಿವೃಷ್ಟಿಯಿಂದಾಗಿ ಎಲ್ಲೆಡೆ ಹೊಲಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಈ ವಾರ ಯಾವುದೇ ತರಕಾರಿಯ ಬೆಲೆ ಕಡಿಮೆಯಾಗಿಲ್ಲ. ಕೆಲ ಕಾಯಿಪಲ್ಲೆ ಬೆಲೆ ಸ್ಥಿರವಾಗಿದ್ದರೆ, ಅನೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಎಲೆಕೋಸು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2,500 ಹೆಚ್ಚಳವಾಗಿದೆ, ಬೆಳ್ಳುಳ್ಳಿ ಬೆಲೆ ₹ 2 ಸಾವಿರ, ಬೀನ್ಸ್‌ ಹಾಗೂ ನುಗ್ಗೆ ಬೆಲೆ ₹ 1 ಸಾವಿರ, ಹಿರೇಕಾಯಿ, ಬೆಂಡೆಕಾಯಿ, ಟೊಮೆಟೊ, ಹೂಕೋಸು ಹಾಗೂ ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹500 ಏರಿಕೆಯಾಗಿದೆ.

ಈರುಳ್ಳಿ, ಹಸಿ ಮೆಣಸಿನಕಾಯಿ, ಗಜ್ಜರಿ, ಬೀಟ್‌ರೂಟ್, ತೊಂಡೆಕಾಯಿ, ಮಂತೆ, ಕರಿಬೇವು ಹಾಗೂ ಪಾಲಕ್ ಬೆಲೆ ಸ್ಥಿರವಾಗಿದೆ. ಮಳೆಯಿಂದಾಗಿ ಹೆಚ್ಚು ಸೊಪ್ಪು ಮಾರುಕಟ್ಟೆಗೆ ಬರುತ್ತಿಲ್ಲ. ಮಳೆ ಮುಂದುವರಿದರೆ ತರಕಾರಿ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ADVERTISEMENT

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ಬೆಂಡೆಕಾಯಿ, ತೊಂಡೆಕಾಯಿ, ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಟೊಮೆಟೊ, ಬೆಳಗಾವಿಯಿಂದ ಗಜ್ಜರಿ ಹಾಗೂ ನುಗ್ಗೆಕಾಯಿ ಆವಕವಾಗಿದೆ.

ಜಿಲ್ಲೆಯ ವಿವಿಧೆಡೆಯಿಂದ ಹಿರೇಕಾಯಿ, ಬದನೆಕಾಯಿ, ಹೂಕೋಸು, ಎಲೆಕೋಸು, ಕೊತಂಬರಿ, ಪಾಲಕ್, ಕರಿಬೇವು, ಸಬ್ಬಸಗಿ, ಮೆಂತೆ ಸೊಪ್ಪು ಮಾರುಕಟ್ಟೆಗೆ ಬಂದಿದೆ. ತೆಲಂಗಾಣದ ಗಡಿಯೊಳಗಿನ ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮಗಳಿಂದಲೂ ತರಕಾರಿ ಬೀದರ್‌ ಮಾರುಕಟ್ಟೆಗೆ ಬಂದಿದೆ.

‘ಸಾಮಾನ್ಯವಾಗಿ ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನ ಗ್ರಾಮಗಳಿಂದಲೇ ಹೆಚ್ಚು ತರಕಾರಿ ಮಾರುಕಟ್ಟೆಗೆ ಬರುತ್ತದೆ. ಜಿಲ್ಲೆಯಲ್ಲಿ ನಾಲ್ಕು ದಿನ ಸತತವಾಗಿ ಸುರಿದ ಮಳೆಯಿಂದಾಗಿ ತರಕಾರಿ ಬೆಳೆ ನೀರಿನಲ್ಲಿ ನಿಂತಿದೆ. ಎಲೆಕೋಸು ಹಾಗೂ ಹೂಕೋಸು ಬೆಳೆ ಸಮಸ್ಯೆಯಾಗಿದೆ. ಬರುವ ದಿನಗಳಲ್ಲಿ ತರಕಾರಿ ಬೆಲೆ ಹೆಚ್ಚಳವಾಗಲಿದೆ’ ಎಂದು ದುರ್ಗಾ ತರಕಾರಿ ವ್ಯಾಪಾರಿ ಪ್ರಶಾಂತ ತಪಸಾಳೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.