ADVERTISEMENT

ಶರಣರ ಚಿತ್ರಗಳಿಗೆ ಅವಮಾನ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:13 IST
Last Updated 24 ಫೆಬ್ರುವರಿ 2026, 8:13 IST
ಬಸವಕಲ್ಯಾಣದ ಬಸವ ಮಹಾದ್ವಾರದ ಶರಣರ ಉಬ್ಬು ಚಿತ್ರಗಳ ಜಾಗ ಅತಿಕ್ರಮಣ ತಡೆಗೆ ಆಗ್ರಹಿಸಿ ಸಾಮಾಜಿಕ ಸಮತಾ ವೇದಿಕೆ ಹಾಗೂ ಬಸವಕೇಂದ್ರದಿಂದ ಸೋಮವಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದ ಬಸವ ಮಹಾದ್ವಾರದ ಶರಣರ ಉಬ್ಬು ಚಿತ್ರಗಳ ಜಾಗ ಅತಿಕ್ರಮಣ ತಡೆಗೆ ಆಗ್ರಹಿಸಿ ಸಾಮಾಜಿಕ ಸಮತಾ ವೇದಿಕೆ ಹಾಗೂ ಬಸವಕೇಂದ್ರದಿಂದ ಸೋಮವಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ಬಸವ ಮಹಾದ್ವಾರದ ಸುತ್ತಲಿನ ಶರಣರ ಉಬ್ಬು ಚಿತ್ರಗಳನ್ನು ವಿರೂಪಗೊಳಿಸಿ ಜಾಗ ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಲು ಆಗ್ರಹಿಸಿ ಸಾಮಾಜಿಕ ಸಮತಾ ವೇದಿಕೆ ಹಾಗೂ ಬಸವಕೇಂದ್ರ ಹುಲಸೂರ ವತಿಯಿಂದ ಸೋಮವಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು.

‘ಬಸವಾದಿ ಶರಣರ ಕಾರ್ಯಕ್ಷೇತ್ರವೆಂದು ದೂರದ ಪ್ರವಾಸಿಗರು ಭೇಟಿ ನೀಡುತ್ತಾರೆ. ನಗರ ಪ್ರವೇಶ ಮಹಾದ್ವಾರದಲ್ಲಿ ನೈರ್ಮಲ್ಯದ ಕೊರತೆಯಿದ್ದು, ಇದನ್ನು ಕಂಡು ಪ್ರವಾಸಿಗರಿಗೆ ಈ ನಾಡಿನ ಕುರಿತು ಮೂಡುವ ಅಭಿಪ್ರಾಯದ ಕಾಳಜಿ ಅಧಿಕಾರಿಗಳಿಗೆ ಇದ್ದಂತಿಲ್ಲ. ಲಕ್ಷಾಂತರ ಹಣ ಖರ್ಚು ಮಾಡಿ ಬಸವಣ್ಣ, ಚನ್ನಬಸವಣ್ಣ, ಅಕ್ಕನಾಗಮ್ಮ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ನುಲಿ ಚಂದಯ್ಯ, ಸಿದ್ದರಾಮೇಶ್ವರ ಮುಂತಾದವರ ಉಬ್ಬು ಚಿತ್ರಗಳನ್ನು ಚಿತ್ರಸಲಾಗಿದೆ. ಅವುಗಳನ್ನು ವಿರೂಪಗೊಳಿಸಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚಿತ್ರಗಳ ಎದುರು ಅಂಗಡಿಗಳನ್ನು ಹಾಕಿದ್ದರಿಂದ ಅವು ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಕಸ ಚೆಲ್ಲಿದೆ. ರಸ್ತೆಯ ಎರಡೂ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಗುಟ್ಕಾ ಸೇವಿಸಿ ಉಗುಳಲಾಗಿದೆ. ಗೋಡೆಗಳಿಗೆ ಬ್ಯಾನರ್, ಪೋಸ್ಟರ್ ಅಂಟಿಸಲಾಗಿದೆ. ದ್ವಾರದ ಕೆಳಗಿರುವ ಬಸವಣ್ಣನವರ ಆಶ್ವಾರೂಢ ಪುತ್ಥಳಿಯ ಮೇಲೆ ದೂಳು ಆವರಿಸಿದೆ. ಅದೆಲ್ಲವನ್ನು ಸರಿಪಡಿಸಬೇಕು. ಈ ಸ್ಥಳದಲ್ಲಿ ಅಂಗಡಿ ಹಾಕುವುದಕ್ಕೆ ಬಸವಕಲ್ಯಾಣ ಮಂಡಳಿಯಿಂದ ಅಥವಾ ನಗರಸಭೆಯವರು ಅನುಮತಿ ನೀಡಿದ್ದಾರೋ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಬೇಕು. ಉಬ್ಬು ಚಿತ್ರಗಳ ಎದುರಿನ ಅತಿಕ್ರಮಣ ಐದು ದಿನದಲ್ಲಿ ತೆರವುಗೊಳಿಸದಿದ್ದರೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ವೇದಿಕೆ ಅಧ್ಯಕ್ಷ ಆಕಾಶ ಖಂಡಾಳೆ, ರಾಜಕುಮಾರ ತೊಂಡಾರೆ ಮಾತನಾಡಿದರು. ಪ್ರಮುಖರಾದ ಮಹಾದೇವ ಮಹಾಜನ, ಸಚಿನ್ ಕೌಟೆ, ಮಲ್ಲಿಕಾರ್ಜುನ ದೇವಪ್ಪ, ರಾಜಕುಮಾರ ತೊಂಡಾರೆ, ಷಣ್ಮುಖ ಪಾಟೀಲ, ಶರಣಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.