ADVERTISEMENT

ರಾಜ್ಯದಲ್ಲಿ ‍ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ: ಬೀದರ್ ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 10:24 IST
Last Updated 14 ನವೆಂಬರ್ 2025, 10:24 IST
   

ಬೀದರ್‌: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಂತಾಗಿವೆ’ ಎಂದು ಬಿಜೆಪಿ ಟೀಕಿಸಿದೆ.

ಹುಮನಾಬಾದ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಅವರು ನಗರದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‌ ಸರ್ಕಾರ ಹಾಗೂ ಜಿಲ್ಲಾ ಪೊಲೀಸರ ಕಾರ್ಯವೈಖರಿಯನ್ನು ಕಟುವಾದ ಮಾತುಗಳಲ್ಲಿ ಟೀಕಿಸಿದರು.

ಡಾ. ಸಿದ್ದಲಿಂಗಪ್ಪ ಪಾಟೀಲ್‌ ಮಾತನಾಡಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಹುಮನಾಬಾದ್‌ನಲ್ಲಿ ನ. 12ರಂದು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಇಟ್ಟುಕೊಂಡಿದ್ದರು. ಮೂರು ದಿನಗಳ ಮುಂಚೆಯೇ ಬಿಜೆಪಿ ಈ ಹೋರಾಟವನ್ನು ಬೆಂಬಲಿಸಿ, ಅದರಲ್ಲಿ ಪಾಲ್ಗೊಳ್ಳುವುದಾಗಿ ಹೇಳಿತ್ತು. ಆನಂತರ ಇತರೆ ಪಕ್ಷಗಳು ಕೂಡ ಬೆಂಬಲ ಸೂಚಿಸಿದವು. ಆದರೆ, ನ. 12ರಂದು ಹೋರಾಟ ನಡೆಸುವಾಗ ನನ್ನ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಪೊಲೀಸರು ಬಂಧಿಸಿ, ಬೇರೆಡೆ ಕರೆದೊಯ್ದರು. ಆದರೆ, ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮುಖಂಡರೂ ಆದ ಮಾಜಿಸಚಿವ ರಾಜಶೇಖರ್‌ ಪಾಟೀಲ್‌ ಹುಮನಾಬಾದ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಅವರನ್ನು ಪೊಲೀಸರು ಬಂಧಿಸಲಿಲ್ಲ ಎಂದರು.

ADVERTISEMENT

ರಾಜ್ಯ ಸರ್ಕಾರ ಮಲಗಿದೆ. ಸರ್ಕಾರ ರೈತರ ವಿರುದ್ಧವಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಆ ಪ್ರತಿಭಟನೆಯಲ್ಲಿ ಭಾಗವಹಿಸಿ ತೋರಿಸಿಕೊಟ್ಟಿದ್ದಾರೆ. ವಿರೋಧ ಪಕ್ಷವಾಗಿ ಬಿಜೆಪಿಯವರಾದ ನಾವು ಸರ್ಕಾರದ ವಿರುದ್ಧದ ಈ ಹೋರಾಟದಲ್ಲಿ ಪಾಲ್ಗೊಂಡಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರ ಭಾವಚಿತ್ರಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೆವು. ಆದರೆ, ಪೊಲೀಸರು ನಮ್ಮ ಬಳಿಯಿದ್ದ ಭಾವಚಿತ್ರಗಳನ್ನು ಕಸಿದುಕೊಂಡು ಹರಿದು ಹಾಕಿದರು. ಬಳಿಕ ನಮ್ಮನ್ನು ಬಂಧಿಸಿ ಬೇರೆಡೆ ಕರೆದೊಯ್ದರು. ಅದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮುಖಂಡರನ್ನು ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ, ಅದರಲ್ಲೂ ಹುಮನಾಬಾದ್‌ ಕ್ಷೇತ್ರದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಂತೆ ಕೆಲಸ ನಿರ್ವಹಿಸುತ್ತಿವೆ. ಪೊಲೀಸರ ಕಸ್ಟಡಿಯಲ್ಲಿದ್ದ ಹೋರಾಟಗಾರರ ಮೇಲೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇದೆಲ್ಲ ಪೊಲೀಸರ ಸಮ್ಮುಖದಲ್ಲೇ ನಡೆದಿದೆ. ಭೀಮರಾವ್‌ ಪಾಟೀಲ್‌ ಕೂಡ ಅಲ್ಲೇ ಇದ್ದರು. ಇದು ಪೊಲೀಸರ ವೈಫಲ್ಯ ಅಲ್ಲವೇ? ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಎಸ್ಪಿ ಹಾಗೂ ಡಿವೈಎಸ್ಪಿ ಅವರೊಂದಿಗೆ ಹಂಚಿಕೊಂಡು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಹೇಳಿದ್ದೆ. ಆದರೆ, ಇದುವರೆಗೆ ಆ ಕೆಲಸ ಮಾಡಿಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ರೈತರ ಹೋರಾಟದ ಮುನ್ನ ದಿನ ಪಿಎಸ್‌ಐ ನನ್ನ ಬಳಿ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ 10 ನಿಮಿಷ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಮರುದಿನ ಇದೇ ಪೊಲೀಸರು, ಹೆದ್ದಾರಿಯಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದರು. ಇದರಿಂದ ಗೊಂದಲ ಸೃಷ್ಟಿಯಾಯಿತು ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ವಿಶ್ವನಾಥ ಪಾಟೀಲ್‌, ಬಸವರಾಜ ಆರ್ಯ, ರಾಜಶೇಖರ್‌ ನಾಗಮೂರ್ತಿ, ಪಕ್ಷದ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ್‌ ಚೌಧರಿ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ವೀರು ದಿಗ್ವಾಲ್‌, ಬಸವರಾಜ ಪವಾರ್‌, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಹಾಜರಿದ್ದರು.

‘ಕಲಬುರಗಿ ಮಾದರಿ ದರ ನಿಗದಿಪಡಿಸಿ’

‘ನೆರೆಯ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ಟನ್‌ ಕಬ್ಬಿಗೆ ₹3,172 ನಿಗದಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಬೀದರ್‌ ಜಿಲ್ಲೆಯಲ್ಲೂ ದರ ನಿಗದಿಪಡಿಸಬೇಕು’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಆಗ್ರಹಿಸಿದರು.

ನನ್ನ ಹುಮನಾಬಾದ್‌ ಮತಕ್ಷೇತ್ರವು ಬೀದರ್‌ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹಂಚಿಹೋಗಿದೆ. ನನ್ನ ಕ್ಷೇತ್ರದ ಕೆಲವು ಹಳ್ಳಿಗಳ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ಕಲಬುರಗಿಯಲ್ಲಿ ₹3,172 ಬೆಲೆ ಸಿಗುತ್ತಿದೆ. ಬೀದರ್‌ ಜಿಲ್ಲೆಯ ಹಳ್ಳಿಗಳಿಗೆ ಕಡಿಮೆ ಕೊಟ್ಟರೆ ಹೇಗೆ? ಕಲಬುರಗಿಯಂತೆ ದರ ನಿಗದಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಹೋರಾಟವನ್ನು ಬಿಜೆಪಿ ಪ್ರಚೋದಿಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಏಕೆಂದರೆ ಇದು ಪಕ್ಷಾತೀತವಾದ ಹೋರಾಟವಾಗಿತ್ತು. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷದವರು ಭಾಗವಹಿಸಿದ್ದರು. ಮಾಜಿಸಚಿವ ರಾಜಶೇಖರ್‌ ಪಾಟೀಲ್‌ ಹುಮನಾಬಾದ್‌ ಕೂಡ ಪಾಲ್ಗೊಂಡಿದ್ದರು. ಇದಕ್ಕೆ ಕಾಂಗ್ರೆಸ್‌ನವರು ಏನು ಹೇಳುತ್ತಾರೆ? ಕಾಂಗ್ರೆಸ್‌ನ ಎಂಎಲ್‌ಸಿ ಭೀಮರಾವ್‌ ಪಾಟೀಲ್‌ ಅವರು ಬೆಲ್ಲದ ಕಾರ್ಖಾನೆ ಹೊಂದಿದ್ದಾರೆ. ಅವರಾದರೂ ಬೆಲೆ ಘೋಷಿಸಬಹುದಿತ್ತು. ಹಾಗೆ ಮಾಡಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಬಿಜೆಪಿಗೆ ಹೋರಾಟದ ಕ್ರೆಡಿಟ್‌ ಸಿಗುತ್ತದೆ ಎಂದು ಕಾಂಗ್ರೆಸ್ಸಿಗರು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ವೋಟ್‌ ಚೋರಿ’ಗೆ ತಕ್ಕ ಉತ್ತರ

‘ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಜಯಗಳಿಸಿದೆ. ‘ವೋಟ್‌ ಚೋರಿ’ ಎಂದು ಆರೋಪಿಸುತ್ತಿದ್ದವರಿಗೆ ಬಿಹಾರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಈಗ ಎಲ್ಲರೂ ಪ್ರಜ್ಞಾವಂತರಿದ್ದಾರೆ. ‘ವೋಟ್‌ ಚೋರಿ’, ಸಂವಿಧಾನದ ಪುಸ್ತಕ ಬಿಟ್ಟರೆ ರಾಹುಲ್‌ ಗಾಂಧಿಯವರ ಬಳಿ ಏನೂ ಇಲ್ಲ. ಸುಮ್ಮನೆ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಮಾತನಾಡಿ, ಕೆಂಪುಕೋಟೆ ಸಮೀಪ ನಡೆದ ಉಗ್ರರ ದಾಳಿಯಲ್ಲಿ ಅನೇಕರು ಸಾವನ್ನಪ್ಪಿರುವ ಕಾರಣ ಈ ಸಲ ಬಿಜೆಪಿ ಬಿಹಾರ ಚುನಾವಣೆಯಲ್ಲಿ ಗೆದ್ದರೂ ವಿಜಯೋತ್ಸವ ಆಚರಿಸದಿರಲು ನಿರ್ಧರಿಸಿದೆ ಎಂದರು.

ಬಿಎಸ್‌ಎಸ್‌ಕೆ ಆರಂಭಕ್ಕೆ ಗ್ಯಾರಂಟಿ ಅಥವಾ ಲೀಜ್‌ ಕೊಡಿ

‘ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಆರಂಭಿಸಲು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟರೆ ₹550 ಕೋಟಿ ಸಾಲ ಕೊಡಲಾಗುವುದು ಎಂದು ಕೇಂದ್ರದ ಎನ್‌ಸಿಡಿಸಿ ಹೇಳಿದೆ. ರಾಜ್ಯ ಸರ್ಕಾರ ಅದಕ್ಕಾದರೂ ಒಪ್ಪಿಕೊಳ್ಳಬೇಕು. ಇಲ್ಲವಾದರೆ ಟೆಂಡರ್‌ ಕರೆದು, ಆಸಕ್ತರಿಗೆ ಲೀಜ್‌ ಮೇಲೆ ಕೊಟ್ಟು ಕಾರ್ಖಾನೆ ಆರಂಭಿಸಬೇಕು’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಆಗ್ರಹಿಸಿದರು.

ಬಿಎಸ್‌ಎಸ್‌ಕೆ ಬೀದರ್‌ ಜಿಲ್ಲೆಯ ಜೀವನಾಡಿ. ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ. 25 ಸಾವಿರ ಷೇರುದಾರರು, 5 ಸಾವಿರ ಕಾರ್ಮಿಕರಿದ್ದಾರೆ. ಈ ಕಾರ್ಖಾನೆ ಆರಂಭಗೊಂಡರೆ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ಶೀಘ್ರ ಕಾರ್ಖಾನೆ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಖಂಡ್ರೆ ಭಾಲ್ಕಿ ಉಸ್ತುವಾರಿ ಸಚಿವರಾ?’

‘ಈಶ್ವರ ಬಿ. ಖಂಡ್ರೆಯವರು ಭಾಲ್ಕಿ ಉಸ್ತುವಾರಿ ಸಚಿವರಾ? ಅಥವಾ ಬೀದರ್‌ ಜಿಲ್ಲೆಯ ಉಸ್ತುವಾರಿಗಳಾ? ಭಾಲ್ಕಿ ತಾಲ್ಲೂಕಿನ ಎಲ್ಲಾ ರೈತರ ಖಾತೆಗೆ ಅತಿವೃಷ್ಟಿ ಪರಿಹಾರದ ಹಣ ಜಮೆಯಾಗಿದೆ. ಆದರೆ, ಜಿಲ್ಲೆಯ ಹುಮನಾಬಾದ್‌, ಬೀದರ್‌, ಬಸವಕಲ್ಯಾಣ ಸೇರಿದಂತೆ ಇತರೆ ತಾಲ್ಲೂಕುಗಳ ರೈತರಿಗೆ ಪರಿಹಾರ ನೀಡಿಲ್ಲ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹೇಳಿದರು.

ಹಂತ ಹಂತವಾಗಿ ಪರಿಹಾರ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಹಂತ ಹಂತವಾಗಿ ಏಕೆ ಕೊಡಬೇಕು. ಒಂದೇ ಸಲ ಕೊಡಲು ಏನು ಕಷ್ಟ? ಕೇಂದ್ರ ಸರ್ಕಾರ ಇಡೀ ದೇಶದ ರೈತರಿಗೆ ಒಂದೇ ಸಲ ಹಣ ಪಾವತಿಸುವುದಿಲ್ಲವೇ? ರೈತರು ರೊಚ್ಚಿಗೆದ್ದರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.