ADVERTISEMENT

ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:57 IST
Last Updated 21 ಜನವರಿ 2026, 4:57 IST
ಕಮಲನಗರ ತಾಲ್ಲೂಕಿನ ಲಕ್ಷ್ಮಿನಗರ ಶಾಲೆಗೆ ಮಂಗಳವಾರ ಶಾಸಕ ಪ್ರಭು ಚವಾಣ್ ಭೇಟಿ ನೀಡಿ ಊಟಕ್ಕೆ ಕುಳಿತಿದ್ದ ಮಕ್ಕಳ ಬಳಿಗೆ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದರು
ಕಮಲನಗರ ತಾಲ್ಲೂಕಿನ ಲಕ್ಷ್ಮಿನಗರ ಶಾಲೆಗೆ ಮಂಗಳವಾರ ಶಾಸಕ ಪ್ರಭು ಚವಾಣ್ ಭೇಟಿ ನೀಡಿ ಊಟಕ್ಕೆ ಕುಳಿತಿದ್ದ ಮಕ್ಕಳ ಬಳಿಗೆ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದರು   

ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಶಾಸಕ ಪ್ರಭು ಚವ್ಹಾಣ ಮಂಗಳವಾರ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ತಪಸ್ಯಾಳ, ಚಾಂದೋರಿ, ಲಕ್ಷ್ಮಿನಗರ ಹಾಗೂ ಮತ್ತಿತರ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಮತ್ತು ಮಕ್ಕಳ ಹಾಜರಾತಿ, ಮಕ್ಕಳ ದಾಖಲಾತಿ, ವಿದ್ಯಾರ್ಥಿಗಳಿಗೆ ಅನುಗುಣ ಶಿಕ್ಷಕರ ನಿಯೋಜನೆ, ಕುಡಿಯುವ ನೀರು, ಶೌಚಾಲಯ, ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರಗಳು ಮಕ್ಕಳಿಗೆ ಸಮರ್ಪಕವಾಗಿ ಒದಗಿಸಲಾಗುತ್ತಿದೆಯೇ ಎನ್ನುವ ಬಗ್ಗೆ ಮಾಹಿತಿ ಪಡೆದರು.

ಲಕ್ಷ್ಮಿನಗರ ಶಾಲೆಯಲ್ಲಿ ಊಟಕ್ಕೆ ಕುಳಿತಿದ್ದ ಮಕ್ಕಳ ಬಳಿಗೆ ತೆರಳಿ ಆಹಾರದ ಗುಣಮಟ್ಟವನ್ನು ವೀಕ್ಷಿಸಿದರು. ಕೆಲವು ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಳಪೆ ಮಟ್ಟದ ಆಹಾರ ಪದಾರ್ಥಗಳಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳು ಎಲ್ಲಿಯೂ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಮಕ್ಕಳಿಗೆ ನೀಡುವ ಆಹಾರ ಚೆನ್ನಾಗಿರಬೇಕು. ಬಿಸಿಯೂಟಕ್ಕೆ ಬಳಸುವ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರಬೇಕು. ಶಾಲೆಗೆ ಬರುವ ಆಹಾರ ಧಾನ್ಯಗಳನ್ನು ಮುಖ್ಯಶಿಕ್ಷಕರು ಪರಿಶೀಲಿಸಿಯೇ ಪಡೆಯಬೇಕು. ಅವಧಿ ಮುಗಿದ ಮತ್ತು ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೊಡಬಾರದು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ತಿಳಿಸಿದರು.

‘ಎಲ್ಲ ಶಾಲೆಗಳಿಗೆ ಉತ್ತಮ ಕಟ್ಟಡ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಶೌಚಾಲಯ, ಆಟದ ಮೈದಾನ, ಕಾಂಪೌಂಡ್‌ ಇಲ್ಲದ ಶಾಲೆಗಳನ್ನು ಗುರುತಿಸಿ ಒದಗಿಸಲು ಕ್ರಮ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ನಂತರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ‘ಗ್ರಾಮಕ್ಕೆ ಶಾಲೆ ಬೇಕೆಂದು ಮನವಿ ಸಲ್ಲಿಸಲಾಗುತ್ತದೆ. ಆದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ. ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಬಹಳಷ್ಟು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಶಾಲೆಗಳ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ಕೊಡುತ್ತೇನೆ. ಶಿಕ್ಷಕರ ಕೊರತೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತಂದರೆ ಸರಿಪಡಿಸುತ್ತೇನೆ. ಆದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲಿ’ ಎಂದು ಶಾಸಕರು ಕೋರಿದರು.

ತಪಸ್ಯಾಳ, ಚಾಂದೋರಿ, ಬೇಡಕುಂದಾ, ಲಕ್ಷ್ಮಿನಗರ, ಹಿಪ್ಪಳಗಾಂವ, ರಕ್ಷ್ಯಾಳ(ಬಿ), ರಕ್ಷ್ಯಾಳ(ಕೆ), ನಿಟ್ಟೂರ(ಕೆ) ಮತ್ತು ಹೆಡಗಾಪೂರನಲ್ಲಿ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾ.ಪಂ. ಇಒ ಹಣಮಂತರಾಯ ಕೌಟಗೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಸುನೀಲ ಚಿಲ್ಲರ್ಗೆ, ಬಿಇೊ ಬಿ.ಜೆ ರಂಗೇಶ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಸಿಡಿಪಿಒ ಇಮಲಪ್ಪ, ಎಡಿಎಲ್‍ಆರ್ ರಾಜಶ್ರೀ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅರಿಹಂತ ಸಾವಳೆ, ಧನರಾಜ ವಡೆಯರ್, ಗಿರೀಶ ವಡೆಯರ್, ಮಂಜು ಸ್ವಾಮಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.