ಖಟಕಚಿಂಚೋಳಿ: ಸಹೋದರತ್ವದ ಮಹತ್ವ ಸಾರುವ ರಕ್ಷಾ ಬಂಧನದ ಅಂಗವಾಗಿ ಮಾರುಕಟ್ಟೆಗೆ ವಿವಿಧ ಮಹನೀಯರ ಭಾವಚಿತ್ರವಿರುವ ರಾಖಿಗಳು ಲಗ್ಗೆಯಿಟ್ಟಿವೆ.
ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ತಮ್ಮ ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿಗಳನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.
‘ಆಧುನಿಕ ಯುಗಕ್ಕೆ ತಕ್ಕಂತೆ ರಾಖಿಗಳನ್ನು ಸಿದ್ಧಪಡಿಸಲಾಗಿದೆ. ಬಸವಣ್ಣ, ಬುದ್ಧ, ಅಂಬೇಡ್ಕರ್, ಕನಕದಾಸ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಸಂಗೋಳ್ಳಿ ರಾಯಣ್ಣ, ಬಸವಲಿಂಗ ಅವಧೂತರು, ಶಿವಕುಮಾರ ಸ್ವಾಮೀಜಿ ಹಲವು ಮಹನೀಯರು ಇರುವ ರಾಖಿಗಳು ಜನರನ್ನು ಆಕರ್ಷಿಸುತ್ತಿವೆ’ ಎಮದು ರಾಖಿಗಳ ತಯಾರಕ ವೈಜಿನಾಥ ಸಜ್ಜನಶೆಟ್ಟಿ ತಿಳಿಸಿದರು.
‘ಮಾರುಕಟ್ಟೆಯಲ್ಲಿ ಸದ್ಯ ನೂಲಿನಿಂದ ಹಿಡಿದು ಹಲವಾರು ಬಗೆಯ ರಾಖಿಗಳಿವೆ. ₹10ರಿಂದ ₹ 200 ರವರೆಗೆ ಬಗೆ ಬಗೆಯ ರಾಖಿಗಳೂ ಮಾರಾಟ ಆಗುತ್ತಿವೆ. ನೂಲು, ರುದ್ರಾಕ್ಷಿ, ಮುತ್ತು, ಹೂವು ಮತ್ತಿತರ ಆಕಾರದ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ‘ ಎಂದು ವ್ಯಾಪಾರಿ ಲವಕುಶ ತಿಳಿಸುತ್ತಾರೆ.
ಅಣ್ಣ-ತಮ್ಮನಿಗೆ ಸಹೋದರಿ ರಾಖಿ ಕಟ್ಟುವ ವೇಳೆ ಪೂಜೆ ಸಲ್ಲಿಸಿ, ಸಿಹಿ ನೀಡುವುದು ಸಂಪ್ರದಾಯ. ಹೀಗಾಗಿ ರಾಖಿಯೊಂದಿಗೆ ಸಿಹಿ ತಿಂಡಿಗಳು, ವಿವಿಧ ಉಡುಗೊರೆಗಳ ಖರೀದಿಯೂ ಜೋರಾಗಿ ಕಂಡು ಬಂತು.
‘ಕಳೆದ ವರ್ಷಕ್ಕೆ ಹೋಲಿಸಿದರೆ ರಕ್ಷಾ ಬಂಧನದ ಸಂಭ್ರಮ ಅಷ್ಟೊಂದು ಕಾಣಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಗ್ರಾಮಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಹಾಳಾಗಿವೆ. ಇನ್ನೂ ಕೆಲವೆಡೆ ಉತ್ತಮ ಇಳುವರಿ ಬಾರದಿರುವುದರಿಂದ ರೈತರ ಮೊಗದಲ್ಲಿ ಸಂತಸ ಕಾಣುತ್ತಿಲ್ಲ’ ಎಂದು ಹಿರಿಯ ರೈತ ಧನರಾಜ ಮುತ್ತಂಗೆ ಬೇಸರ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ವಿವಿಧ ಗಾತ್ರ ಬೆಲೆ ವಿನ್ಯಾಸದ ರಾಖಿಗಳಿವೆ. ಆದರೆ ಶುದ್ಧ ಮನಸ್ಸಿನಿಂದ ಕಟ್ಟುವ ರಾಖಿಗೆ ಹೆಚ್ಚಿನ ಮಹತ್ವವಿರುತ್ತದೆ.-ಸಪ್ನಾ ಜಿ. ಗೃಹಿಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.