ಕಮಲನಗರ: ಪಟ್ಟಣದ ಮುಖ್ಯ ಬೀದಿಗಳಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ನಿಮಿತ್ತ ಆಕರ್ಷಕ ಪಥ ಸಂಚಲನ ನಡೆಯಿತು.
ಸ್ವಯಂ ಸೇವಕರು ಸಮವಸ್ತ್ರ ಧರಿಸಿ ಕೈಯಲ್ಲಿ ಲಾಠಿ ಹಿಡಿದು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಶನೇಶ್ವರ ಮಂದಿರದಿಂದ ಆರಂಭವಾದ ಪಥ ಸಂಚಲನವು ಕೃಷಿ ಉತ್ಪನ್ನ ಮಾರುಕಟ್ಟೆ, ಅಲ್ಲಮಪ್ರಭು ವೃತ್ತ, ಸೋನಾಳ ಮುಖ್ಯ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರ, ಹಳೆ ಪೊಲೀಸ್ ಠಾಣೆ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯಿತಿ ಕಚೇರಿ, ಅಕ್ಕಮಹಾದೇವಿ ವೃತ್ತ, ವಿಠ್ಠಲ ರುಕ್ಮೀಣಿ ಮಂದಿರ, ಶಿವಾಜಿ ವೃತ್ತ, ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಿಂದ ಸಾಗಿ ಚನ್ನಬಸವ ಪಟ್ಟದ್ದೇವರ ಪೌಢ ಶಾಲೆ ಆವರಣಕ್ಕೆ ಬಂದು ತಲುಪಿತು.
ಅಲ್ಲಮಪ್ರಭು ವೃತ್ತದ ಬಳಿ ಆಗಮಿಸಿದ ಗಣವೇಷಾಧಾರಿಗಳಿಗೆ ಡೋಣಗಾಂವ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಹಾಗೂ ಠಾಣಾಕುಶನೂರ ವೀರಕ್ತ ಮಠದ ಸಿದ್ಧಲಿಂಗ ಸ್ವಾಮಿಜಿ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.
ಶಾಸಕ ಪ್ರಭು ಚವ್ಹಾಣ ಅವರು ಬಾಲೂರ(ಕೆ) ಕ್ರಾಸ್ ಬಳಿ ಆಗಮಿಸಿ ಸ್ವಯಂ ಸೇವಕರ ಪಥ ಸಂಚಲನಕ್ಕೆ ಪುಷ್ಪಾರ್ಚನೆ ಮಾಡಿದರು.
ಪಥ ಸಂಚಲನ ಉತ್ಸವದಲ್ಲಿ ವಾದ್ಯ ಸಂಭ್ರಮ, ಜೈಘೋಷಣೆಗಳು ವಿಶೇಷವಾಗಿ ಪಥ ಸಂಚಲನದಲ್ಲಿ ಗಮನ ಸೆಳೆದವು. ವಿವಿಧ ಬಡಾವಣೆಗಳಲ್ಲಿ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿಗೈದು ಸ್ವಾಗತಿಸಿದರು.
ಡಿವೈಎಸ್ಪಿ ಶಿವಾನಂದ ಪವಾಡಶೇಟ್ಟಿ, ಸಿಪಿಐ ಶ್ರೀಕಾಂತ ಅಲ್ಲಾಪೂರ, ಪಿಎಸ್ಐ ಆಶಾ ರಾಠೋಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.