
ಶಾಸಕ ಸಲಗರ
ಬಸವಕಲ್ಯಾಣ (ಬೀದರ್ ಜಿಲ್ಲೆ): ಶಾಸಕ ಶರಣು ಸಲಗರ ಸಾಲವಾಗಿ ಪಡೆದ ₹99 ಲಕ್ಷ ಹಿಂದಿರುಗಿಸದೆ ಮೋಸ ಮಾಡಿರುವ ಸಂಬಂಧ ನಗರದ ವ್ಯಾಪಾರಿ ಸಂಜೀವಕುಮಾರ ಸುಗೂರೆ ನೀಡಿರುವ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಎಸಿಜೆಎಂ ನ್ಯಾಯಾಧೀಶ ಕೆ.ಎನ್.ಶಿವಕುಮಾರ ಅವರ ಸೂಚನೆಯ ಮೇರೆಗೆ ಪ್ರಕರಣ ದಾಖಲಾಗಿದೆ. ಅವರ ಮೂಲಕವೇ ದೂರು ಮತ್ತು ಪೆನ್ ಡ್ರೈವ್ ರಜಿಸ್ಟರ್ ಪೋಸ್ಟ್ ಮೂಲಕ ಶನಿವಾರ ಠಾಣೆಗೆ ಬಂದಿದೆ.
ಶರಣು ಸಲಗರ ಅವರ ಸಂಬಂಧಿ ಹಾಗೂ ಆಪ್ತರಾಗಿದ್ದ ಸಂಜೀವಕುಮಾರ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ₹99 ಲಕ್ಷ ಹಣ ನೀಡಿದ್ದರು. ಇದಕ್ಕೂ ಮೊದಲು ಕೆಲ ಸಲ ಪಡೆದಿದ್ದ ಹಣ ವಾಪಸ್ಸು ನೀಡಿದ್ದರಿಂದ ನಂಬಿಕೆಯ ಆಧಾರದ ಮೇಲೆ ಈ ಹಣ ನೀಡಲಾಗಿತ್ತು. ಆದರೆ ನಂತರದಲ್ಲಿ ಈ ಹಣ ಹಿಂದಿರುಗಿಸುವುದಕ್ಕೆ ಇವರು ವಿಳಂಬ ಮಾಡಿದರು.
ಹೀಗಾಗಿ ಸಂಶಯ ಬಂದಿದ್ದರಿಂದ ಕೆಲ ಹಿರಿಯರ ಸಮ್ಮುಖದಲ್ಲಿ ಸಭೆ ನಡೆಸಿ ಈ ಬಗ್ಗೆ ವಿಚಾರಿಸಲಾಯಿತು. ಆಗ ಶರಣು ಸಲಗರ ಅವರು ಚೆಕ್ ನೀಡಿದ್ದರು. ಆದರೆ ಅದು ಬ್ಯಾಂಕ್ ನಲ್ಲಿನ ಖಾತೆ ಬಂದ್ ಆಗಿದ್ದರಿಂದ ಬೌನ್ಸ್ ಆಗಿದೆ. ಈ ಬಗ್ಗೆ ವಿಚಾರಿಸುವುದಕ್ಕೆ ಶಾಸಕರ ಮನೆಗೆ ಹೋಗಿದ್ದ ಪತ್ನಿ ಮತ್ತು ಪುತ್ರನಿಗೆ ಮೋಸ ಮಾಡುವ ದುರುದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಂಜೀವಕುಮಾರ ಅವರ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.