ADVERTISEMENT

ಜನವಾಡ: ವೈಜ್ಞಾನಿಕ ಹೈನುಗಾರಿಕೆ ಅರಿವು ಮೂಡಿಸಿದ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 14:53 IST
Last Updated 21 ಜನವರಿ 2022, 14:53 IST
ವೈಜ್ಞಾನಿಕ ಹೈನುಗಾರಿಕೆ ತರಬೇತಿ ಪ್ರಯುಕ್ತ ಬೀದರ್ ತಾಲ್ಲೂಕಿನ ಜನವಾಡದ ರೈತ ಮಚ್ಚೇಂದ್ರ ಅವರ ಹೊಲದಲ್ಲಿನ ಕೊಟ್ಟಿಗೆಯಲ್ಲಿ ಶಿಬಿರಾರ್ಥಿಗಳಿಗೆ ಹೈನುಗಾರಿಕೆ ಮಾಹಿತಿ ನೀಡಲಾಯಿತು
ವೈಜ್ಞಾನಿಕ ಹೈನುಗಾರಿಕೆ ತರಬೇತಿ ಪ್ರಯುಕ್ತ ಬೀದರ್ ತಾಲ್ಲೂಕಿನ ಜನವಾಡದ ರೈತ ಮಚ್ಚೇಂದ್ರ ಅವರ ಹೊಲದಲ್ಲಿನ ಕೊಟ್ಟಿಗೆಯಲ್ಲಿ ಶಿಬಿರಾರ್ಥಿಗಳಿಗೆ ಹೈನುಗಾರಿಕೆ ಮಾಹಿತಿ ನೀಡಲಾಯಿತು   

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಶಿಬಿರವು ರೈತರಲ್ಲಿ ವೈಜ್ಞಾನಿಕ ಹೈನುಗಾರಿಕೆ ಅರಿವು ಮೂಡಿಸಿತು.

ಹೈನು ರಾಸುಗಳಲ್ಲಿ ಪೋಷಕಾಂಶಗಳ ನಿರ್ವಹಣೆ, ಹೈನು ರಾಸುಗಳ ವಿವಿಧ ತಳಿಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿಯಲ್ಲಿ ಹೈನುಗಾರಿಕೆ ಮಹತ್ವ, ಜಾನುವಾರುಗಳಲ್ಲಿ ರೋಗ ನಿರ್ವಹಣೆ, ಮೌಲ್ಯವರ್ಧಿತ ಹಾಲು ಹಾಗೂ ಹಾಲಿನ ಉತ್ಪನ್ನ, ಲಸಿಕೆ ಪ್ರಾಮುಖ್ಯ, ಜಾನುವಾರು ವಿಮೆ ಮೊದಲಾದವುಗಳ ಮಾಹಿತಿ ಒದಗಿಸಿತು.

ವಿವಿಧೆಡೆಯ ರೈತರು ವೈಜ್ಞಾನಿಕ ಹೈನುಗಾರಿಕೆಗೆ ಸಂಬಂಧಿಸಿದಂತೆ ತಮ್ಮ ಗೊಂದಲ, ಸಂದೇಹಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸಮಾಧಾನಕರ ಉತ್ತರ ಪಡೆದುಕೊಂಡರು.

ADVERTISEMENT

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಧಾನ ಪಶು ವೈದ್ಯಾಧಿಕಾರಿ ಡಾ. ಯೋಗೇಂದ್ರ ಕುಲಕರ್ಣಿ, ಪಶು ವೈದ್ಯಾಧಿಕಾರಿಗಳಾದ ಡಾ. ಧನರಾಜ ಗಿರಿಮಲ್ಲ, ಡಾ. ಮುಜೀಬ್, ಡಾ. ಸೂರ್ಯಕಾಂತ ಪರಶೆಟ್ಟಿ, ತೋಟಗಾರಿಕೆ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಪಶು ವಿಜ್ಞಾನಿ ಡಾ. ಅಕ್ಷಯಕುಮಾರ, ಡಾ. ದೀಪಕ್ ಪಾಟೀಲ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ಶಿಬಿರಾರ್ಥಿಗಳಿಗೆ ಜನವಾಡದ ಪ್ರಗತಿಪರ ರೈತ ಮಚ್ಚೇಂದ್ರ ಅವರ ಹೊಲಕ್ಕೆ ಶೈಕ್ಷಣಿಕ ಪ್ರವಾಸ ಒಯ್ದು ಹೈನುಗಾರಿಕೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಅವರು, ನೂತನ ಹೈನುಗಾರಿಕೆ ಘಟಕ ಹಾಗೂ ಹೊಸ ಹೊಸ ತಾಂತ್ರಿಕತೆಗಳನ್ನು ಅನುಸರಿಸಿದರೆ ರೈತರಿಗೆ ಹೈನುಗಾರಿಕೆಯಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿಸಿದರು.

ಶಿಬಿರಾರ್ಥಿಗಳಾದ ಸುನೀಲ್ ಬಸಪ್ಪ, ರಾಜಹಂಸ ಗುಂಡಪ್ಪ , ಸಂತೋಷ ಮುಳೆ ತಮ್ಮ ಅನುಭವ ಹಂಚಿಕೊಂಡರು. ಒಟ್ಟು 40 ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.