ಬೀದರ್: ‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಸಾಹಿತಿಗಳನ್ನೇ ಆಯ್ಕೆ ಮಾಡುವುದು ಸೂಕ್ತ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜಕಾರಣಿಗಳೂ ಮಾಡಬಹುದು. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಾಹಿತಿಗಳು ಮಾತ್ರ ಗಟ್ಟಿಗೊಳಿಸಲು ಸಾಧ್ಯ’ ಎಂದು ಶಿಕ್ಷಕ ಓಂಕಾರ ಪಾಟೀಲ ಅಭಿಪ್ರಾಯಪಟ್ಟರು.
ಅವರು ಅತಿವಾಳೆಯವರ ಪರ ಮೈಲೂರು ಕ್ರಾಸ್ನ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದ ಚುನಾವಣಾ ಪೂರ್ವ ಸಿದ್ಧತಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
‘ಬರಹಗಾರರ ಮನೋಭಾವನೆ ಅರಿತು ಕೆಲಸ ಮಾಡುವ ಸಾಮರ್ಥ್ಯ ಸಾಹಿತಿಗಳಿಗೆ ಇರುತ್ತದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಂಜೀವಕುಮಾರ ಅತಿವಾಳೆ ಎಲ್ಲ ದೃಷ್ಟಿಯಿಂದಲೂ ಸೂಕ್ತವಾಗಿದ್ದಾರೆ’ ಎಂದರು.
ಪ್ರಗತಿಪರ ಚಿಂತಕ ಜಗದೀಶ್ವರ ಬಿರಾದಾರ ಮಾತನಾಡಿ, ‘ಆಡಂಬರ ಹಾಗೂ ಅಬ್ಬರದಿಂದ ಸಾಹಿತ್ಯದ ವಾತಾವರಣ ನಿರ್ಮಾಣವಾಗದು. ಸಂಜೀವ್ ಅತಿವಾಳೆ ಅವರು ಸರಳವಾಗಿ ಪ್ರಚಾರ ಮಾಡುತ್ತ ಮತದಾರರ ಮನ ಗೆಲ್ಲುತ್ತಿದ್ದಾರೆ’ ಎಂದರು.
ಅಭ್ಯರ್ಥಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ಜಿಲ್ಲೆಯ ಉದಯೋನ್ಮುಖ ಬರಹಗಾರರಿಗಾಗಿ ಕಮ್ಮಟ,
ಹತ್ತು-ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿ ಜಿಲ್ಲೆಯಲ್ಲಿ ಸಾಹಿತ್ಯದ ವಾತಾವರಣ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತಿದ್ದೆನೆ. ನನ್ನನ್ನು ಬೆಂಬಲಿಸಿದರೆ ಕನ್ನಡಪರ ಚಟುವಟಿಕೆಗಳನ್ನು ಇನ್ನಷ್ಟು ಆಸಕ್ತಿಯಿಂದ ಮಾಡಲು ಪ್ರೇರಣೆ ದೊರೆಯಲಿದೆ’ ಎಂದರು.
ಸಾಹಿತಿ ಶಾಮರಾವ್ ನೆಲವಾಡೆ, ರವೀಂದ್ರ ಲಂಜವಾಡಕರ್, ಲಕ್ಷ್ಮಣ ಮೇತ್ರೆ, ಆತ್ಮನಂದ ಬಂಬುಳಗಿ, ಶಿಕ್ಷಕರಾದ ಪ್ರಬಣ್ಣ ಸುತಾರ, ಬಮಶೆಟ್ಟಿ ಬಿರಾದಾರ, ಕಾಶೀನಾಥ ಪಾಟೀಲ, ಮಹೇಶ ಮಡಿವಾಳ, ನರಸಾರೆಡ್ಡಿ, ಭೀಮಶ್ಯಾ ಬಸಲಾಪೂರ, ಭಿಮಸೇನ ಗಾದಗಿ, ಧನರಾಜ ಕು. ಚಿಂಚೋಳಿ, ಖಂಡಪ್ಪಾ ಪಾತರಪಳ್ಳಿ, ಮೆಹಬೂಬ ಉಸ್ತಾದ, ಮಹಮದ್ ಇಲಿಯಾಸ್, ರಾಮಶೆಟ್ಟಿ ಐನೋಳೆ, ಶಿವಶರಣ ಜಾಪಾಟೆ, ದಿಲೀಪ ಪಾಂಚಾಳ, ನರಸಿಂಗ್ ಕುಲಕರ್ಣಿ, ಬಾಲಾಜಿ ಪವಾರ್, ಸುನೀಲ ಅಮಲಾಪೂರ, ಬಸಿರೋದ್ದೀನ್, ಅಬ್ದುಲ್ ಅಲಾಸ್, ನಿವೃತ್ತಿ ಪಟ್ನೆ, ಜ್ಞಾನೇಶ್ವರ ವಗ್ಗೆ, ಮಹೇಶ ಮೈಲೂರು, ಶಿವರಾಜ ಚಂದಾಪೂರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.