ಔರಾದ್: ಸೂರ್ಯಗ್ರಹಣದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಪ್ರಾರ್ಥನೆ ನಡೆಯಿತು.
ಬೆಳಿಗ್ಗೆ 8 ಗಂಟೆಯಿಂದ ಇಲ್ಲಿಯ ಅಮರೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
‘ಹಿರಿಯರು ಹೇಳುವ ಪ್ರಕಾರ ಗ್ರಹಣದ ವೇಳೆ ಊಟ ಮಾಡುವಂತಿಲ್ಲ. ಹೀಗಾಗಿ ನಮ್ಮ ಮಕ್ಕಳಿಂದ ಹಿಡಿದು ಎಲ್ಲರೂ ಬೆಳಿಗ್ಗೆ 11.30 ತನಕ ಊಟ, ತಿಂಡಿಯಿಂದ ದೂರ ಉಳಿದೇವು’ ಎಂದು ಔರಾದ್ ನಿವಾಸಿ ಸಂಜುಕುಮಾರ ಮೇತ್ರೆ ಹೇಳುತ್ತಾರೆ.
ಗ್ರಹಣದ ಸಮಯದಲ್ಲಿ ಪೂಜೆಗೆ ಅವಕಾಶವಿಲ್ಲ. ಹೀಗಾಗಿ ಗ್ರಹಣ ಮುಗಿದ ಮೇಲೆ ಇಡೀ ದೇವಸ್ಥಾನ ಸ್ವಚ್ಛಗೊಳಿಸಿ ಪೂಜೆ ಮಾಡಲಾಯಿತು ಎಂದು ಅಮರೇಶ್ವರ ದೇವಸ್ಥಾನದ ಪೂಜಾರಿ ರವಿ ಸ್ವಾಮಿ ಹೇಳಿದರು.
ಶಾಲೆಗಳಿಗೆ ರಜೆ: ಗ್ರಹಣದ ಅಂಗವಾಗಿ ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ರಜೆ ಕೊಡಲಾಗಿದೆ. ಕೆಲವೆಡೆ ಎಳ್ಳಮಾವಸ್ಯೆ ಪ್ರಯುಕ್ತ ಸ್ಥಳೀಯ ಘೋಷಣೆ ಮಾಡಲಾಗಿದೆ. ತಾಲ್ಲೂಕಿನ ಎನಗುಂದಾ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಶಿಕ್ಷಕ ಚಂದ್ರಕಾಂತ ನಿರ್ಮಳೆ, ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಳೆ ಸೂರ್ಯಗ್ರಹಣದ ಕುರಿತು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.