ಬೀದರ್: ‘ಸಾರ್ವಜನಿಕರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು’ ಎಂದು ಸಂಸದ ಭಗವಂತ ಖೂಬಾ ಸಲಹೆ ಮಾಡಿದರು.
ನಗರದ ಶಹಾಪುರ ಗೇಟ್ ಹತ್ತಿರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಆವರಣದಲ್ಲಿ ಬುಧವಾರ ನೂತನ ಅಂಚೆ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಚೆ ಇಲಾಖೆ ಉತ್ತಮ ಸೇವೆಗೆ ಹೆಸರಾಗಿದೆ. ವಿವಿಧ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ’ ಎಂದು ತಿಳಿಸಿದರು.
‘ಡಿಜಿಟಲ್ ಇಂಡಿಯಾದ ಭಾಗವಾಗಿಯೇ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ಸ್ ಪೇಮೆಂಟ್ ಬ್ಯಾಂಕ್ ತೆರೆದಿದೆ. ವಿದ್ಯಾರ್ಥಿಗಳು ಈ ಬ್ಯಾಂಕ್ ಅನ್ನು ಬಳಸಿಕೊಂಡು ನಗದು ರಹಿತ ವ್ಯವಹಾರ ನಡೆಸಬೇಕು’ ಎಂದು ಅಂಚೆ ಇಲಾಖೆಯ ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ ಹೇಳಿದರು.
‘ಶಾಹೀನ್ ಕಾಲೇಜಿನಲ್ಲಿ ದೇಶದ ವಿವಿಧೆಡೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಂಚೆ ಇಲಾಖೆಯು ಕಾಲೇಜು ಆವರಣದಲ್ಲಿ ಅಂಚೆ ಶಾಖೆ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದರು.
‘ಅಂಚೆ ಇಲಾಖೆಯು ಎಲ್ಲ ವರ್ಗದ ಜನರನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಅವುಗಳ ಲಾಭ ಪಡೆಯಬೇಕು’ ಎಂದು ಹೇಳಿದರು.
ಬೀದರ್ ಅಂಚೆ ಅಧೀಕ್ಷಕ ವಿ. ನರಸಿಂಹರಾವ್ ಅವರು, ಸುಕನ್ಯಾ ಸಮೃದ್ಧಿ, ಉಳಿತಾಯ ಖಾತೆ, ಠೇವಣಿ ಖಾತೆ ಸೇರಿದಂತೆ ಅಂಚೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ. ಸಿದ್ರಾಮ, ಅಂಚೆ ನಿರೀಕ್ಷಕ ಇಂದ್ರೇಶ್, ಇಂಡಿಯಾ ಪೋಸ್ಟ್ಸ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ಮಿರ್ಜಾ ಬೇಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.