ADVERTISEMENT

ಬೀದರ್‌| ಬೆಂಕಿಯುಗುಳುತ್ತಿರುವ ನೇಸರ; ಜನ ತತ್ತರ

ಕಾದ ಕಾವಲಿಯಂತಾದ ನೆಲ; ತಾಪಮಾನದಲ್ಲಿ ದಿಢೀರ್‌ ಏರಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಏಪ್ರಿಲ್ 2025, 7:50 IST
Last Updated 24 ಏಪ್ರಿಲ್ 2025, 7:50 IST
ಬಿಸಿಲಿನಿಂದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಗಣನೀಯವಾಗಿ ತಗ್ಗಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು ರಿಕ್ಷಾ ಚಾಲಕರೊಬ್ಬರು ಬೀದರ್‌ನಲ್ಲಿ ಬುಧವಾರ ಸಾಗಿದರು
‌ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬಿಸಿಲಿನಿಂದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಗಣನೀಯವಾಗಿ ತಗ್ಗಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು ರಿಕ್ಷಾ ಚಾಲಕರೊಬ್ಬರು ಬೀದರ್‌ನಲ್ಲಿ ಬುಧವಾರ ಸಾಗಿದರು ‌ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ   

ಬೀದರ್‌: ನಾಲ್ಕೈದು ದಿನಗಳಿಂದ ಸೂರ್ಯ ಬೆಂಕಿಯುಗುಳುತ್ತಿದ್ದು, ಕೆಂಡದಂತಹ ಬಿಸಿಲಿಗೆ ಜನ ತತ್ತರಿಸಿ ಹೋಗುತ್ತಿದ್ದಾರೆ.

ಬೆಂಕಿಯಂತಹ ಬಿಸಿಲಿಗೆ ನೆಲ ಕಾದ ಕಾವಲಿಯಂತಾಗುತ್ತಿದೆ. ಬೆಳಿಗ್ಗೆ ಹತ್ತು ಗಂಟೆಯಾಗುತ್ತಿದ್ದಂತೆ ಬಿಸಿಲು ಪ್ರಖರವಾಗುತ್ತಿದೆ. ಸ್ವಲ್ಪ ಹೊರಗೆ ಹೋದರೂ ಮೈಸುಡುವ ಅನುಭವ ಉಂಟಾಗುತ್ತಿದೆ.

ನಾಲ್ಕೈದು ದಿನಗಳ ಹಿಂದೆ ಜಿಲ್ಲೆಯಲ್ಲಿ 36ರಿಂದ 38 ಡಿಗ್ರಿ ಸೆಲ್ಸಿಯಸ್‌ ನಡುವೆ ಗರಿಷ್ಠ ತಾಪಮಾನ ಇತ್ತು. ಈಗ ದಿಢೀರನೆ 40ರಿಂದ 41 ಡಿಗ್ರಿ ಆಸುಪಾಸಿಗೆ ಏರಿಕೆಯಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಚಡಪಡಿಕೆ ಹೆಚ್ಚಾಗಿದೆ. ಬಹುತೇಕರು ಹೊರಗೆ ಓಡಾಡುವುದೇ ಕಡಿಮೆ ಮಾಡಿದ್ದಾರೆ. ತೀರ ಅನಿವಾರ್ಯವಿದ್ದರಷ್ಟೇ ಹೊರಗೆ ಹೋಗುತ್ತಿದ್ದಾರೆ.

ADVERTISEMENT

ಈಗಾಗಲೇ ಬೀದರ್‌ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಚೇರಿಯ ಸಮಯ ಬದಲಾವಣೆ ಆಗಿದೆ. ಕಚೇರಿ ಕಾರ್ಯ ಮುಗಿಸಿಕೊಂಡು ಜನ ಮಧ್ಯಾಹ್ನ ಮನೆ ಸೇರಿದರೆ ಪುನಃ ಹೊತ್ತಾದ ನಂತರವಷ್ಟೇ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಮಧ್ಯಾಹ್ನವಂತೂ ಜನ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಪ್ರಮುಖ ರಸ್ತೆಗಳೆಲ್ಲ ನಿರ್ಜನವಾಗುತ್ತಿವೆ. ಬಿಕೋ ಎನ್ನುತ್ತಿದೆ. ಇದು ವ್ಯಾಪಾರ ವಹಿವಾಟಿನ ಮೇಲೆಯೂ ನೇರ ಪರಿಣಾಮ ಬೀರಿದೆ. ಮಧ್ಯಾಹ್ನದ ಸಮಯದಲ್ಲಿ ನಗರದ ಗಾಂಧಿ ಗಂಜ್‌ ಸೇರಿದಂತೆ ಇತರೆ ಮಳಿಗೆಗಳಲ್ಲಿ ಜನರೇ ಕಾಣಿಸುತ್ತಿಲ್ಲ. ಬೆಳ್ಳಂಬೆಳಿಗ್ಗೆ ವರ್ತಕರು, ರೈತರು ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದಾರೆ. ಜನ ಖರೀದಿಗೆ ಸಂಜೆ ಮೇಲೆ ಹೊರಗೆ ಹೋಗುತ್ತಿದ್ದಾರೆ.

ಬಿಸಿಲಿನ ಪ್ರಮಾಣ ಎಷ್ಟು ತೀವ್ರವಾಗಿದೆಯೆಂದರೆ ಬಿಸಿ ಗಾಳಿ ಬೀಸುತ್ತಿದೆ. ಬಿಸಿಲ ಝಳ ಹೆಚ್ಚಾಗಿದೆ. ಹೊರಗೆ ಹೋದರೂ ಸಮಾಧಾನವಿಲ್ಲ, ಮನೆಯೊಳಗೆ ಇದ್ದರೂ ಸಮಾಧಾನವಿಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಸಿಗ್ನಲ್‌ನಲ್ಲಿ ವಾಹನ ಸವಾರರಿಗೆ ಎರಡು ನಿಮಿಷ ನಿಲ್ಲಲು ಪರದಾಟ ನಡೆಸುವಂತಹ ಪರಿಸ್ಥಿತಿ ಇದೆ. ನಗರದ ಎರಡ್ಮೂರು ಕಡೆಗಳಲ್ಲಿ ಸಿಗ್ನಲ್‌ ವ್ಯವಸ್ಥೆಯಿದ್ದು, ಅಲ್ಲೆಲ್ಲಾ ನೆರಳಿನ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಿಗ್ನಲ್‌ನಲ್ಲಿ ನೆರಳಿಗೆ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ಬೀದರ್‌ನಲ್ಲೂ ವ್ಯವಸ್ಥೆ ಮಾಡಬೇಕು. ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ರಮೇಶ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ಬಿಸಿ ದೋಸೆಗಳಂತೆ ಏರ್‌ ಕೂಲರ್‌ಗಳು ಬಿಕರಿಯಾಗುತ್ತಿವೆ. ಆರ್ಥಿಕವಾಗಿ ಸದೃಢರಾಗಿದ್ದವರೂ ಎಸಿ ಮೊರೆ ಹೋಗುತ್ತಿದ್ದಾರೆ, ಮಧ್ಯಮ ವರ್ಗದವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಲಸ್ಸಿ, ತಂಪು ಪಾನೀಯ, ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗಿದೆ.

ಮಧ್ಯಾಹ್ನ ವ್ಯಾಪಾರ ವಹಿವಾಟೇ ನಡೆಯುತ್ತಿಲ್ಲ. ಬಿಸಿಲಿಗೆ ಹೆದರಿಕೊಂಡು ಜನ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ
ಸಾಯಿಕೃಷ್ಣ ಕಿರಾಣ ಮಳಿಗೆ ವ್ಯಾಪಾರಿ
ವಾರದೊಳಗೆ ವಾತಾವರಣ ಬಹಳಷ್ಟು ಬದಲಾಗಿದೆ. ಸುಡುವ ಬಿಸಿಲಿಗೆ ಹೊರಗೆ ಹೋಗಲು ಹೆದರಿಕೆಯಾಗುತ್ತಿದೆ. ಮಳೆ ಬಂದರೆ ಸಾಕಪ್ಪ ಅನಿಸುತ್ತಿದೆ
ಬಸವರಾಜ ಹಿರಿಯ ನಾಗರಿಕ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.