ಬೀದರ್: ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಕಳುಹಿಸಿದರು.
ಪರಿಶಿಷ್ಟರ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಪ್ರಗತಿಗಾಗಿ ಜಾರಿಗೊಳಿಸಲಾದ ಮೀಸಲಾತಿಯ ಸೌಲಭ್ಯ ಒಂದೆರಡು ಸ್ಪರ್ಶ ಜಾತಿಗಳಿಗಷ್ಟೇ ದೊರಕಿದೆ. ಹಲವು ಒಳಜಾತಿಗಳು ಇದರಿಂದ ವಂಚಿತವಾಗಿವೆ. ಮೀಸಲಾತಿ ಜಾರಿ ಸಂದರ್ಭದಲ್ಲಿ ಅವರ ಸ್ಥಿತಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಹೀಗಾಗಿ ಒಳ ಮೀಸಲಾತಿ ಅಗತ್ಯ ಇದೆ ಎಂದು ಹೇಳಿದರು.
ಬರುವ ವಿಧಾನಮಂಡಲ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ. ಸದಶಿವ ವರದಿ ಮಂಡಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರುಣ ಕುದರೆ, ಜಿಲ್ಲಾ ಸಂಚಾಲಕ ಜೀವನ್ ಆರ್. ಬುಡ್ತಾ, ಸಂಘಟನಾ ಸಂಚಾಲಕರಾದ ನಾಗೇಶ ಭಾವಿಕಟ್ಟಿ, ಪ್ರಭಾಕರ ಹೊನ್ನಾ, ಮನೋಹರ ಕೊಹ್ಲಿ, ಪ್ರಭಾಕರ ಭೋಸ್ಲೆ, ಗುಂಡಪ್ಪ ಜ್ಯೋತಿ, ಅಡವೆಪ್ಪ ನಾಗೋರಾ, ಮಲ್ಲಿಕಾರ್ಜುನ ಕಾಂಬಳೆ, ಖಜಾಂಚಿ ಪ್ರಕಾಶ ಮಾಳಗೆ, ನಗರ ಸಂಚಾಲಕ ಎಂ.ಡಿ. ಅಯೂಬ್, ಶಿವರಾಜ ಬೋಧಿಸತ್ವ, ರಜನಿಕಾಂತ ನಿಜಾಂಪುರೆ, ಧನರಾಜ ಮುಸ್ತಾಪುರೆ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.