ಬೀದರ್: ಈದ್–ಉಲ್–ಅದಾ (ಬಕ್ರೀದ್) ಅಂಗವಾಗಿ ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನಗಳಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ಈದ್ಗಾ ಮೈದಾನದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರಾರ್ಥನೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು. ನಗರದ ವಿವಿಧ ಬಡಾವಣೆಗಳಿಂದ ಜನ ಬಂದು ಭಾಗವಹಿಸಿದ್ದರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಆನಂತರ ಸಮುದಾಯದವರಿಗೆ ಹಬ್ಬದ ಶುಭ ಕೋರಿದರು.
ವಯಸ್ಕರು, ಚಿಣ್ಣರು ಪರಸ್ಪರ ಕೈಕುಲುಕಿ, ಆಲಿಂಗನ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಈದ್ಗಾ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಾಹನ ಸಂಚಾರದ ಮಾರ್ಗ ಕೂಡ ಬದಲಿಸಲಾಗಿತ್ತು. ಬೆಳಿಗ್ಗೆ ಗಂಟೆಗೂ ಹೆಚ್ಚು ಕಾಲ ಮಳೆಯಾದ ಕಾರಣ ಈದ್ಗಾ ಮೈದಾನದ ಅಲ್ಲಲ್ಲಿ ನೀರು ಸಂಗ್ರಹಗೊಂಡಿತ್ತು.
ನಗರದ ಚಿದ್ರಿ, ಮೈಲೂರ್, ಶಹಾಪುರ ಗೇಟ್, ತಾಲ್ಲೂಕಿನ ಅಮಲಾಪೂರ, ಘೋಡಂಪಳ್ಳಿ, ಚಿಟ್ಟಾ, ಕಮಠಾಣ, ಮಂದಕನಳ್ಳಿ, ಗಾದಗಿ, ಹಮೀಲಾಪೂರ ಸೇರಿದಂತೆ ಹಲವು ಈದ್ಗಾ ಮೈದಾನಗಳಲ್ಲಿ ಜನ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಬಂಧು, ಮಿತ್ರರನ್ನು ಮನೆಗೆ ಆಹ್ವಾನಿಸಿ ಸಿಹಿ ಉಣಬಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.