ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಸಮಾನತೆಯ ಹರಿಕಾರ ಬಸವಣ್ಣನವರ ನೆಲದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ರಾಜ್ಯಕ್ಕೆ ಒಳ್ಳೆಯ ಭವಿಷ್ಯ ಇಲ್ಲ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಪರವಾಗಿ ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಅಂದರೆ ಅದು ಭಾರತೀಯ ಜನತಾ ಪಾರ್ಟಿ ಅನ್ನೋದು ತಪ್ಪು. ಅದೀಗ ಬಿಸಿನೆಸ್ ಜನತಾ ಪಾರ್ಟಿ ಆಗಿ ಬದಲಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೋರಾಟಕ್ಕೆ ಹಣೆಯುತ್ತಿಲ್ಲ. ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬಂಗಾರಪ್ಪ ಅವರು ಕಾಂಗ್ರೆಸ್ನಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿ ಆಗಿದ್ದರು. ಅವರು ಆರಂಭಿಸಿದ್ದ ಪಂಪ್ಸೆಟ್ಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆ, ಆಶ್ರಯ, ಅಕ್ಷಯ, ಭಾಗ್ಯಜ್ಯೋತಿ ಯೋಜನೆಗಳು ಎಲ್ಲಿವೆ? ಗ್ರಾಮೀಣ ಕೃಪಾಂಕ ನೀಡುವ ಪದ್ದತಿ ರದ್ದಾಗಿದೆ. ಸಿದ್ದರಾಮಯ್ಯ ಅವರಲ್ಲಿ ಬಂಗಾರಪ್ಪನವರ ಗುಣ ಕಂಡಿದ್ದರಿಂದಲೇ ಈ ಪಕ್ಷಕ್ಕೆ ಬಂದಿದ್ದೇನೆ’ ಎಂದರು.
ಬೀದರ್ ಶಾಸಕ ರಹೀಂಖಾನ್, ಪಕ್ಷದ ಹಿರಿಯ ಮುಖಂಡರಾದ ರವೀಂದ್ರ ಬೋರೋಳೆ, ದತ್ತು ಮೂಲಗೆ, ಚಂದ್ರಕಾಂತ ಮೇತ್ರೆ, ನಗರಸಭೆ ಸದಸ್ಯ ರಾಮ ಜಾಧವ, ಸಂತೋಷ ಗುತ್ತೇದಾರ, ಜೈದೀಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.