
ಬೀದರ್: ‘ಅಚ್ಚಗನ್ನಡದ ಬೇಸಾಯಗಾರ ಒಕ್ಕಲಿಗ ಮುದ್ದಣನವರು. ಆಗಿನ ಕಾಲದಲ್ಲಿಯೇ ಭೂ ರಕ್ಷಣೆ, ಬೇಸಾಯ ಯಾವ ರೀತಿ ಮಾಡಬೇಕು ಎಂದು ತಿಳಿಸಿಕೊಟ್ಟವರು. ಮಣ್ಣಲ್ಲಿ ಮಣ್ಣಾಗಿ ದುಡಿದು ಪರಮ ಸತ್ಯವನ್ನು ತೋರಿಸಿಕೊಟ್ಟವರು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ಶರಣ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಕ್ಕಲಿಗ ಮುದ್ದಣ್ಣ ಒಕ್ಕಲುತನವನ್ನೇ ಶ್ರೇಷ್ಠ ಉದ್ಯೋಗ ಎಂದು ನಂಬಿದವರು. ಇವರು ವಚನದಲ್ಲಿ ಬದುಕಿನ ಸಾರವಿದೆ. ರೈತರಿಗೆ ಸಾಮರಸ್ಯದ ತಿಳಿ ಹೇಳಿದವರು ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಮಾತನಾಡಿ,‘ಧನ, ಕನಕ, ಅಧಿಕಾರ–ಅಂತಸ್ತು ಶಾಶ್ವತವಲ್ಲ. ಈ ಪ್ರಾಪಂಚಿಕ ವಿಷಯಗಳ ಗಳಿಕೆಯಿಂದ ದೊರೆಯುವ ಸುಖ ಶಾಶ್ವತವಲ್ಲ. ಆದರೆ, ಪರಮ ಸತ್ಯದ ಸುಖ ಶಾಶ್ವತವಾದದ್ದು, ಅಂಗವೇ ಭೂಮಿಯಾಗಿ ಅಂಥ ಆತ್ಮಾನಂದ ಪಡೆಯುವುದಕ್ಕೆ ನಾವೆಲ್ಲರೂ ಭೌತಿಕ ಬದುಕಿನ ದೇಹಾರೋಗ್ಯ ಚಟುವಟಿಕೆಯ ಕೃಷಿಯ ಜೊತೆಗೆ ಆಧ್ಯಾತ್ಮಿಕ ಕೃಷಿ ಮಾಡಬೇಕು ಎಂದು ಹೇಳಿದವರು ಒಕ್ಕಲಿಗ ಮುದ್ದಣ್ಣ’ ಎಂದು ತಿಳಿಸಿದರು.
ಶಿವಲಿಂಗ ಹೇಡೆ ಅನುಭಾವ ನೀಡಿ,‘ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ ಜಂಗಮ ದಾಸೋಹ ನಡೆಸುವುದು ಒಕ್ಕಲಿಗ ಮುದ್ದಣ್ಣನವರ ವ್ರತವಾಗಿತ್ತು. ಅಜ್ಞಾನಕ್ಕೆ ತಕ್ಕ ಕ್ರಿಯೆ ಇಲ್ಲದಿದ್ದರೆ ಅವರ ಜೀವನ ವ್ಯರ್ಥವೆಂದು ಒಕ್ಕಲಿಗ ಮುದ್ದಣ್ಣನವರು ತಮ್ಮ ಕಾಯಕ ಮತ್ತು ಜೀವನದ ಮೂಲಕ ನಡೆದು ತೋರಿಸಿ ಕೊಟ್ಟಿದ್ದಾರೆ’ ಎಂದರು.
ಬಸವ ಸೇವಾ ಪ್ರತಿಷ್ಠಾನದ ರಾಚಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾಲಹಳ್ಳಿಯ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ತೂಗಾಂವೆ ಧ್ವಜಾರೋಹಣಗೈದರು. ನಿರ್ದೇಶಕ ಬಿ.ಜೆ.ವಿಷ್ಣುಕಾಂತ, ಸಮೃದ್ಧಿ ಸೌಹಾರ್ದ ಸಹಕಾರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಬಸವಕಲ್ಯಾಣ ವಚನ ಸಮೂಹ ಸಂಸ್ಥೆಯ ಅಧ್ಯಕ್ಷ ವೀರಶೆಟ್ಟಿ ಮಲಶೆಟ್ಟಿ ಉಪಸ್ಥಿತರಿದ್ದರು.
ಕರಣ ಬಿರಾದಾರ ವಚನ ಪಠಣ ಮಾಡಿದರು. ಆಕಾಶವಾಣಿ ಕಲಾವಿದ ದಿಲೀಪ್ ದೇಸಾಯಿ, ಸೂರ್ಯಕಾಂತ ಬಿರಾದಾರ, ಶರಣಪ್ಪ ಜಮಾದಾರ ವಚನ ಸಂಗೀತ ನಡೆಸಿಕೊಟ್ಟರು. ಸುಷ್ಮಾ ಪವಾಡಶೆಟ್ಟಿ ಸ್ವಾಗತಿಸಿದರೆ, ಬಸವರಾಜ ಬಿರಾದಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.