
ಬೀದರ್: ನಗರದ ಸಾಯಿ ಶಾಲೆ ಮೈದಾನದಲ್ಲಿ ಜನವರಿ 24ರಿಂದ ಮೂರು ದಿನ ‘ವೀರಲೋಕ ಪುಸ್ತಕ ಸಂತೆ’ ನಡೆಯಲಿದ್ದು, ‘ಜ್ಞಾನದಾಸೋಹ’ಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
24ರಂದು ಬೆಳಿಗ್ಗೆ 10ಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಚಾಲನೆ ನೀಡಲಿದ್ದಾರೆ.ರಾಜ್ಯದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಸಾಹಿತಿಗಳು, 50ಕ್ಕೂ ಹೆಚ್ಚು ಪುಸ್ತಕ ಪ್ರಕಾಶನ ಸಂಸ್ಥೆಗಳವರು ಪಾಲ್ಗೊಳ್ಳಲಿದ್ದಾರೆ. ವೇದಿಕೆಯ ಪಕ್ಕದಲ್ಲಿ 50 ಪುಸ್ತಕ ಮಳಿಗೆಗಳು ತಲೆ ಎತ್ತಿದ್ದು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೂರು ದಿನಗಳಲ್ಲಿ ಒಟ್ಟು 22 ಗೋಷ್ಠಿಗಳು ಜರುಗಲಿವೆ. ‘ಮಹಿಳಾ ಸಾಹಿತ್ಯದಲ್ಲಿ ಮೌಲ್ಯಗಳು’, ‘ಹೊಸ ತಲೆಮಾರಿನ ಬರಹಗಾರರು–ಬಿಕ್ಕಟ್ಟುಗಳು’, ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ’, ವಿಜ್ಞಾನ–ತಂತ್ರಜ್ಞಾನ ಮತ್ತು ಸಾಹಿತ್ಯ’, ‘ಕಾಲದ ಎದುರು ನಿಂತ ಪದಗಳು’ ಪ್ರಮುಖವಾದವುಗಳು. ಗೋಷ್ಠಿ ಬಳಿಕ ಸಂವಾದ, ಚರ್ಚೆಗೂ ಅವಕಾಶ ಕಲ್ಪಿಸಲಾಗಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವಚನ ಗಾಯನ, ಜನಪದ ಗೀತ ಗಾಯನ, ಗಜಲ್ ಗಾಯನ, ಸಮೂಹ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.
ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲಿ ಮೊದಲ ಬಾರಿಗೆ ಪುಸ್ತಕ ಸಂತೆ ಏರ್ಪಡಿಸಲಾಗಿದೆ. ಎಲ್ಲ ಜಿಲ್ಲೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸುವುದು ನಮ್ಮ ಮುಖ್ಯ ಉದ್ದೇಶ–ವೀರಕಪುತ್ರ ಶ್ರೀನಿವಾಸ, ವೀರಲೋಕ ಬುಕ್ಸ್ ಬೆಂಗಳೂರು
ಪುಸ್ತಕ ಸಂತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋಷ್ಠಿಗಳು ನಡೆಯಲಿರುವ ವೇದಿಕೆ ಪುಸ್ತಕ ಮಳಿಗೆಗಳ ಸಿದ್ಧಗೊಂಡಿವೆ. ಜನ ಪುಸ್ತಕ ಜಾತ್ರೆಯಲ್ಲಿ ಭಾಗವಹಿಸಿ ಜ್ಞಾನ ದಾಸೋಹ ಪಡೆಯಬೇಕು–ಗುರುನಾಥ ರಾಜಗೀರಾ, ಆಯೋಜಕ ಪುಸ್ತಕ ಸಂತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.