ADVERTISEMENT

ಕೈಗಾರಿಕೆ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ

ಕೈಗಾರಿಕೆಗಳ ಪ್ರಗತಿ ಸಭೆಯಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 13:40 IST
Last Updated 9 ಸೆಪ್ಟೆಂಬರ್ 2021, 13:40 IST
ಬೀದರ್‌ನ ಸಹಾರ್ದ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕೈಗಾರಿಕೆಗಳ ಪ್ರಗತಿ ಹಾಗೂ ಕುಂದು ಕೊರತೆ ಸಭೆಯಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿದರು
ಬೀದರ್‌ನ ಸಹಾರ್ದ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕೈಗಾರಿಕೆಗಳ ಪ್ರಗತಿ ಹಾಗೂ ಕುಂದು ಕೊರತೆ ಸಭೆಯಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿದರು   

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿದರು.

ನಗರದ ನೌಬಾದ್‍ನ ಸಹಾರ್ದ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಕೈಗಾರಿಕೆಗಳ ಪ್ರಗತಿ ಹಾಗೂ ಕುಂದು ಕೊರತೆ ಕುರಿತ ಸಭೆ ನಡೆಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 13 ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಂಬಂಧಿಸಿದ ಕುಂದು ಕೊರತೆಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ADVERTISEMENT

ಸರ್ಕಾರ ಜನರಿಗೆ ಒಳಿತು ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ರಾಸಾಯನಿಕ ಕೈಗಾರಿಕೆಗಳಿಗೆ ಪರವಾನಗಿ ಕೊಡಬಾರದು. ಸದ್ಯ ನಡೆಯುತ್ತಿರುವ ಕೈಗಾರಿಕೆಗಳು ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಕೈಗಾರಿಕೆಗಳ ಮಾಲೀಕರು ನಿಜಾಂಪುರ, ಕೊಳಾರ ಸೇರಿದಂತೆ ಕೈಗಾರಿಕೆಗಾಗಿ ಜಮೀನು ಕಳೆದುಕೊಂಡವರು ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಟೈಯರ್ ಕಾರ್ಖಾನೆಗಳಿಗೆ ಯಾರೂ ಪರವಾನಗಿ ಕೊಟ್ಟಿಲ್ಲ. ಹೀಗಾಗಿ ಅವುಗಳನ್ನು ಮೊದಲು ಬಂದ್ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾಜಿಕ ಕಾಳಜಿಯೊಂದಿಗೆ ಕೈಗಾರಿಕೆಗಳನ್ನು ನಡೆಸಬೇಕು. ಸಮಾಜಕ್ಕೆ ಮಾರಕವಾಗುವ ಕೆಲಸ ಮಾಡಬಾರದು ಎಂದು ಕಾರ್ಖಾನೆಗಳ ಮಾಲೀಕರಿಗೆ ಸಲಹೆ ಮಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸತೀಶಕುಮಾರ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಡಿ.ಎಚ್. ಪ್ರಕಾಶ, ಉಪ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಕಾಂತ ಮಿಶ್ರಾ, ಕೆಎಸ್‍ಎಫ್‍ಸಿ ಶಾಖಾ ವ್ಯವಸ್ಥಾಪಕ ಶಿವಕುಮಾರ, ಬೀದರ್ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಕೆಮಿಕಲ್ ಮತ್ತು ಫಾರ್ಮಾ ಅಸೋಸಿಯೇಷನ್ ಅಧ್ಯಕ್ಷ ದೇವೇಂದ್ರಪ್ಪ, ಎಸ್‍ಸಿ, ಎಸ್‍ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಜಯಕುಮಾರ, ಉದ್ಯಮಿ ಭೋಜಪ್ಪ ಮೆಟಿಗೆ, ರವಿಕಿರಣ, ಸುಬ್ರಹ್ಮಣ್ಯ, ಅಶೋಕ, ರಘುನಾಥ ಗಾಯಕವಾಡ, ಲೋಕೇಶ, ಪ್ರದೀಪ, ಸಿದ್ರಾಮಪ್ಪ ಕಪಲಾಪೂರ, ಮಲ್ಲಿಕಾರ್ಜುನ, ಶಿವಶರಣಪ್ಪ ಪಾಟೀಲ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.