ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಜಿಟಿ–ಜಿಟಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆ ಹಾನಿಯಾಗಿದೆ. ಮನೆಗಳ ಗೋಡೆಗಳು ಕುಸಿಯುತ್ತಿವೆ.
ಪಟ್ಟಣದ ಗೊಂದಳಿ ಗಲ್ಲಿಯಲ್ಲಿ ಗುರುವಾರ ಉತ್ತಮ ನಾಗನಾಥ ಎನ್ನುವವರಿಗೆ ಸೇರಿದ ಮಣ್ಣಿನ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿ ಜೀತು ನಾಗನಾಥ, ತುಷಾರ ನಾಗನಾಥ್, ಸುರೇಶ ನಾಗನಾಥ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅಂಗಳದಲ್ಲಿದ್ದ ಬಹುತೇಕ ವಸ್ತುಗಳು ಹಾಳಾಗಿವೆ.
ತಾಲ್ಲೂಕಿನ ಉಡಬಾಳ, ಮುಸ್ತರಿ, ವಳಖಿಂಡಿ, ಇಟಗಾ, ಮಂಗಲಗಿ, ಮನ್ನಾಎಖ್ಖೇಳಿ, ನಾಗನಕೇರಾ, ನಿರ್ಣಾ, ನಿರ್ಣಾ ವಾಡಿ, ಬಸಿಲಾಪುರ್, ಚಾಂಗಲೇರಾ, ಕರಕನಳ್ಳಿ, ಮುತ್ತಂಗಿ, ಮದರಗಿ, ಭಾದ್ಲಾಪುರ್, ಬನ್ನಳ್ಳಿ, ಬೆಳಕೇರಾ, ಮಾಡಗುಳ, ಕಂದಗುಳ, ಶಾಮತಾಬಾದ್ ಗ್ರಾಮದ ವಿವಿಧ ರೈತರ ಹೊಲ ಹಾಗೂ ಗದ್ದೆಗಳಲ್ಲಿ ನೀರು ಹರಿದು ಸೋಯಾ, ಎಳ್ಳಿನ ಬೆಳೆ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
‘ತಲೆ ಎತ್ತರಕ್ಕೆ ಬೆಳೆದ ಕಬ್ಬು ನೆಲಕ್ಕುರುಳಿದೆ. ಕಬ್ಬು ಕಟ್ಟಿಸಲು ಸಮಸ್ಯೆ ಆಗಿದೆ. ಕೃಷಿ ಕಾರ್ಮಿಕರು ದುಬಾರಿ ಕೂಲಿ ಕೇಳುತ್ತಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ಕುಡಂಬಲ್ ರೈತ ಬಸಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.