ಖೂಬಾ
ಬೀದರ್: ‘ಸರ್ಕಾರ ನನ್ನ ಮನೆ ಹಾಗೂ ಗೃಹ ಕಚೇರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದದ್ದೇಕೆ? ಒಂದುವೇಳೆ ನನಗೇ ಹಾಗೂ ನನ್ನ ಕುಟುಂಬದವರು, ಕಚೇರಿಯ ಸಿಬ್ಬಂದಿಗೆ ಏನಾದರೂ ಆದರೆ ಪೊಲೀಸ್ ಇಲಾಖೆಯೇ ಹೊಣೆ’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಪತ್ರ ಬರೆದಿದ್ದು, ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ಪಿ ಆದವರು ಸಮಾಜಘಾತುಕ ಘಟನೆಗಳ ವಿರುದ್ಧ ಕೆಲಸ ಮಾಡಬೇಕು. ಅದು ಬಿಟ್ಟು ಪ್ರಕ್ಷುಬ್ಧ ಸಂದರ್ಭದಲ್ಲಿ ನನ್ನ ವಿರುದ್ಧ ಹಗೆತನ ಸಾಧಿಸುತ್ತಿರುವುದು ಎಷ್ಟು ಸರಿ? ನನ್ನ ಗಮನಕ್ಕೆ ತರದೇ ಏಪ್ರಿಲ್ 27ರಂದು ನನಗೆ ಒದಗಿಸಿದ್ದ ಪೊಲೀಸ್ ಭದ್ರತೆ ವಾಪಸ್ ಪಡೆದಿರುವುದರ ಹಿಂದಿನ ಉದ್ದೇಶವಾದರೂ ಏನು? ನನಗೆ ಕಲ್ಪಿಸಿದ್ದ ಭದ್ರತೆ ಸಮಾಜ ಘಾತುಕರಿಗೆ ಒದಗಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಕೇಂದ್ರ ಸಚಿವನ ವಿರುದ್ಧ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂತಹ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. 10 ವರ್ಷ ಸಂಸದನಾಗಿ, ಮೂರು ವರ್ಷ ಕೇಂದ್ರ ಸಚಿವನಾಗಿ ಕೆಲಸ ನಿರ್ವಹಿಸಿದ್ದೇನೆ. ಮುಲಾಜಿಲ್ಲದೇ ಸಮಾಜಘಾತುಕ ಶಕ್ತಿಗಳ ವಿರುದ್ಧ ಧ್ವನಿ ಎತ್ತುತ್ತ ಬಂದಿರುವೆ. ಮುಂದೆಯೂ ಎತ್ತುವೆ. ನನ್ನ ವಿರುದ್ಧ ಹಲ್ಲೆ ಯತ್ನ, ಪಿತೂರಿಗಳು ನಡೆದಿವೆ. ಈ ಕಾರಣಕ್ಕಾಗಿ ನಾಲ್ಕು ವರ್ಷಗಳಿಂದ ನನಗೆ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.