ಬೀದರ್: ‘ಕಮಲನಗರ ತಹಶೀಲ್ದಾರ್ ಕಚೇರಿಯಲ್ಲಿ ಫೋಡಿ ಹಾಗೂ ಹದ್ದುಬಸ್ತು ಮಾಡಿಕೊಳ್ಳಲು ₹20ರಿಂದ ₹30 ಸಾವಿರ ಲಂಚ ಕೇಳುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಮನವಿ ಮಾಡಿದರು.
ಸಂಗಮದಲ್ಲಿ ಸೋಮವಾರ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ದೂರು ಸಲ್ಲಿಸಿದರು.
‘ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಜನ ಸಾಮಾನ್ಯರಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ. ಸರ್ಕಾರ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹವಾಗಿದೆ. ಸ್ಥಳದಲ್ಲೇ ಫೋಡಿ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
‘ಭೂಮಿ ಕೆಲಸಕ್ಕಾಗಿ ಕಮಲನಗರ ತಾಲ್ಲೂಕಿನ ಗ್ರಾಮಸ್ಥರು ಔರಾದ್ ತಾಲ್ಲೂಕಿಗೆ ಹೋಗಬೇಕಾಗಿದೆ. ಮೊದಲು ಸಮಸ್ಯೆ ನಿವಾರಣೆಯಾಗಬೇಕು. ಉಪ ನೋಂದಣಿ ಕಚೇರಿಯಲ್ಲೂ ಸಮಸ್ಯೆ ಇದೆ. ಉಪ ಖಜಾನೆ ಕಚೇರಿಯ ಸಿಬ್ಬಂದಿ ವೇತನ ಅರ್ಧ ಔರಾದ್ ಹಾಗೂ ಇನ್ನರ್ಧ ಕಮಲನಗರದಲ್ಲಿ ಆಗುತ್ತಿದೆ. ಸರ್ಕಾರಿ ಸಿಬ್ಬಂದಿ ವೇತನಕ್ಕಾಗಿ ಎರಡು ತಾಲ್ಲೂಕುಗಳಿಗೆ ಹೋಗಬೇಕಾಗಿದೆ’ ಎಂದು ತಿಳಿಸಿದರು.
‘ಕಮಲನಗರದಲ್ಲಿ ಈಗಾಗಲೇ ಭೂಮಿ ಶಾಖೆ ಶುರು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.