ಕುಡಿತದ ಅಮಲಿನಲ್ಲಿ ಟವರ್ ಏರಿದ ಯುವಕ
ಕೊಳ್ಳೇಗಾಲ: ಕುಡಿದ ಮತ್ತಿನಲ್ಲಿ ಟವರ್ ಹತ್ತಿದ ಯುವಕನೊಬ್ಬ ಸಾಯುವ ಬೆದರಿಕೆ ಹಾಕಿ ರಾದ್ಧಾಂತ ಸೃಷ್ಟಿಸಿದ ಪ್ರಸಂಗ ನಗರದಲ್ಲಿ ಭಾನುವಾರ ನಡೆಯಿತು.
ಗದಗ ಜಿಲ್ಲೆ ಶಿರುಗೋಡು ತಾಲ್ಲೂಕು ಬಾಡಕೆರ ಗ್ರಾಮದ ಹನುಮಂತ (27) ಟವರ್ ಮೇಲೆ ಹತ್ತಿದ ಯುವಕ.
ಅಂಬೇಡ್ಕರ್ ಭವನದ ಎದುರಿನ ಹಳೇಕುರುಬರ ಬೀದಿಯಲ್ಲಿರುವ ಟವರ್ ಏರಿದ ಹನುಮಂತ, ‘ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಅವರನ್ನು ನೋಡಬೇಕು. ಅವರನ್ನು ಕರೆಯಿಸಿ. ಇಲ್ಲದಿದ್ದರೆ ಸಾಯುತ್ತೇನೆ’ ಎಂದು ಬೆದರಿಕೆ ಒಡ್ಡಿದ. ಮಹೇಶ್ ಸ್ಥಳಕ್ಕೆ ಬಂದ ಬಳಿಕ ಕೆಳಕ್ಕಿಳಿದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದರು.
ಕುಡಿತದ ಅಮಲಿನಲ್ಲಿ ಆತ ಹೀಗೆ ವರ್ತಿಸಿರುವುದಾಗಿ ಪೊಲೀಸರು ತಿಳಿಸಿದರು.
ಚಿಕ್ಕಲ್ಲೂರು ಜಾತ್ರೆ: ಮದ್ಯ ಮಾರಾಟ ನಿಷೇಧ
ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆಯುವ ಸಿದ್ದಪ್ಪಾಜಿ ಜಾತ್ರೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.
ಗ್ರಾಮದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಜ. 2ರ ಬೆಳಿಗ್ಗೆ 6ರಿಂದ ಜ. 7ರ ಮಧ್ಯರಾತ್ರಿಯವರೆಗೆ ಯಾವುದೇ ರೀತಿಯ ಮದ್ಯ ಮಾರಾಟ ಮಾಡದಂತೆ ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.