ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಸ್ಥಳೀಯರಿಗೆ ಅವಕಾಶ ನೀಡಲಾಯಿತು. ಮಲೆ ಮಹದೇಶ್ವರಬೆಟ್ಟದಲ್ಲಿ ರಸ್ತೆಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಶಾಸಕ ಆರ್.ನರೇಂದ್ರ ಅವರು ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ದರ್ಶಿ ಎ.ಜೆ.ರೂಪಾ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು. ಬಳಿಕ, ವ್ಯಾಪಾರಕ್ಕೆ ಅನುವು ಮಾಡಿಕೊಡಲಾಯಿತು.
‘ಭಾನುವಾರ ರಾತ್ರಿ ಕೊಳ್ಳೇಗಾಲದಲ್ಲಿರುವ ಶಾಸಕ ನರೇಂದ್ರ ಅವರ ನಿವಾಸಕ್ಕೆ ತೆರಳಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೋರಿದ್ದೆವು. ಅದಕ್ಕೆ ಸ್ಪಂದಿಸಿದ ನರೇಂದ್ರ ಅವರು ವ್ಯಾಪಾರಕ್ಕೆ ಅವಕಾಶ ನೀಡುವಂತೆ ಎ.ಜೆ.ರೂಪಾ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ದೇವಾಲಯಕ್ಕೆ ಬರುವ ಭಕ್ತರಿಗೆ ಅನನುಕೂಲ ಆಗದಂತೆ ವ್ಯಾಪಾರ ನಡೆಸಿಕೊಂಡು ಹೋಗಿ ಎಂದು ನಮಗೂ ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ವ್ಯಾಪಾರ ಆರಂಭಿಸಿದ್ದೇವೆ’ ಎಂದು ರಸ್ತೆಬದಿವ್ಯಾಪಾರಿಯೊಬ್ಬರು ಸಂತೋಷ ವ್ಯಕ್ತಪಡಿಸಿದರು.
ಅನೇಕ ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸಿ ಬದುಕು ನಡೆಸುತ್ತಿದ್ದೆವು. ಸುಮಾರು 700ರಿಂದ 800 ಅಂಗಡಿಗಳು ಇಲ್ಲಿದ್ದವು ಆದರೆ, ಪ್ರಾಧಿಕಾರವು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಕೇವಲ 150 ಮಳಿಗೆಗಳನ್ನು ನಿರ್ಮಿಸಿ ಗುತ್ತಿಗೆ ಆಧಾರದ ಮೇಲೆ ಕೆಲವರಿಗೆ ಮಾತ್ರ ನೀಡಲು ಮುಂದಾಗಿದೆ. ಇದರಿಂದಾಗಿ ಉಳಿದ ವ್ಯಾಪಾರಿಗಳ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಅವರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.