ಚಾಮರಾಜನಗರ: ತಾಲ್ಲೂಕಿನ ಬಂಡಿಗೆರೆ ಗ್ರಾಮದಲ್ಲಿ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಾಳಮ್ಮ, ಗುಂಟಮ್ಮ ಹಾಗೂ ಮಂಟೇಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಸೋಮವಾರ ರಾತ್ರಿ ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಬಳಿಕ ಕೆಂಡವನ್ನು ಉದ್ದಕ್ಕೆ ಹರಡಿ ಭಕ್ತರು ಕೊಂಡ ಹಾಯಲು ಅನುವಾಗುವಂತೆ ಸಿದ್ದಪಡಿಸಲಾಯಿತು.
ಬೆಳಿಗ್ಗೆ ಸತ್ತಿಗೆ, ಸೂರಿಪಾನ, ಬಿರುದು ಬಾವಲಿ, ಛತ್ರಿ ಚಾಮರಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಂಸಾಳೆ, ಬ್ಯಾಂಡ್ಸೆಟ್ ನಾದ, ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಅಂದವನ್ನು ಹೆಚ್ಚಿಸಿದ್ದವು. ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಉತ್ಸವ ಅಂತರ ಕಾಳಮ್ಮನವರ ದೇವಸ್ಥಾನ ಪ್ರವೇಶಿಸಿದ ಬಳಿಕ ಅದ್ದೂರಿ ಕೊಂಡೋತ್ಸವ ನಡೆಯಿತು. ಪೂಜಾರಿ ಹಾಗೂ ಭಕ್ತರು ನಿಗಿ ನಿಗಿ ಕೆಂಡದ ರಾಶಿಯನ್ನು ಹಾಯ್ದು ಹರಕೆ ಸಮರ್ಪಿಸಿದರು. ಕಾಲ್ತುಳಿತ ಹಾಗೂ ಅವಘಡ ಸಂಭವಿಸಿದತೆ ಕೊಂಡೋತ್ಸವ ವೀಕ್ಷಣೆಗೆ ಎಲ್ಇಡಿ ಟಿವಿ ಪರದೆಗಳನ್ನು ಅಳವಡಿಸಲಾಗಿತ್ತು. ಶಾಸಕ ಪುಟ್ಟರಂಗಶೆಟ್ಟಿ, ಗ್ರಾಮದ ಮುಖಂಡರು ಕೊಂಡೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.