ಯಳಂದೂರು:ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರೈತ ದಂಪತಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ
ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೇಶನಕ್ಕಾಗಿಜಮೀನು ಬಿಟ್ಟು ಕೊಡಲು ಒಪ್ಪದೇ ಇದ್ದುದಕ್ಕೆ ಯಜಮಾನರು ಬಹಿಷ್ಕಾರ ಹಾಕಿದ್ದಾರೆ ಎಂದು ಗ್ರಾಮದ ಸರೋಜಮ್ಮ–ನಂಜುಂಡಸ್ವಾಮಿ ದಂಪತಿ ದೂರಿದ್ದಾರೆ.ದಂಪತಿ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದು, ಅವರು ಈ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
'ನನ್ನ ಒಡೆತನದ 1 ಎಕರೆ 1 ಗುಂಟೆ ಜಮೀನನ್ನು ಗ್ರಾಮದ ಯಜಮಾನರು ನಿವೇಶನವಾಗಿ ಪರಿವರ್ತಿಸಲು ಬೇಡಿಕೆ ಇಟ್ಟಿದ್ದರು. ಇದಕ್ಕೆ
ಒಪ್ಪದಿದ್ದಾಗ ಗ್ರಾಮದ ಚರಂಡಿ ನೀರನ್ನು ಕೃಷಿ ಭೂಮಿಗೆ ತುಂಬಿಸಿ, ಅನಾರೋಗ್ಯಕ್ಕೆಕಾರಣರಾಗಿದ್ದಾರೆ. ನನಗೆ ದೇವಾಲಯದ ಮಾರಮ್ಮ ದೇವರ ತೀರ್ಥವನ್ನು ನೀಡುತ್ತಿಲ್ಲ. ಮಕ್ಕಳನ್ನುಯಾರು ಮಾತನಾಡಿಸುತ್ತಿಲ್ಲ. ಇದರಿಂದ ಬದುಕುವುದೇ ಕಷ್ಟವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇವೆ' ಎಂದು ನಂಜುಂಡಯ್ಯ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಊರಿನ ಯಜಮಾನರು ಆರೋಪ ನಿರಾಕರಿಸಿದ್ದಾರೆ. ‘ನಂಜುಂಡಸ್ವಾಮಿ ಅವರು ತಮ್ಮ ಜಮೀನಿನ ಬಳಿಯ ಚರಂಡಿಯನ್ನು ಮುಚ್ಚಿಕೊಂಡಿದ್ದಾರೆ. ಜಮೀನು ವಿವಾದ ಬೇಗಬಗೆ ಹರಿಯಲಿ ಎಂಬ ಉದ್ಧೇಶದಿಂದ ಇಂತಹ ಕತೆಗಳನ್ನು ಸೃಷ್ಟಿಸಿದ್ದಾರೆ. ಸಾಮಾಜಿಕ ಬಹಿಷ್ಕಾರ, ದಂಡ ಹಾಕಿಲ್ಲ’ ಎಂದು ಅವರು ಹೇಳಿದ್ದಾರೆ.
ದೂರಿನ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಬಿ.ಕೆ.ಸುದರ್ಶನ್ ಅವರು, ‘ಸಂತ್ರಸ್ತರು ಕಚೇರಿಗೆ ಬಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದರ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸರಿಗೆ ತಿಳಿಸಲಾಗಿದೆ’ ಎಂದರು.
‘ಯಜಮಾನರನ್ನುಕರೆಸಿ ವಿಚಾರಣೆ ನಡೆಸಿದ್ದೇವೆ. 2015ರಲ್ಲಿ ನಡೆದಿದ್ದ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ವಿವಾದ ಈಗ ಮರುಕಳಿಸಿದೆ. ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಎಂದು ಯಜಮಾನರು ತಿಳಿಸಿದ್ದಾರೆ.ದೂರುದಾರ ವಿಚಾರಣೆಗೆ ಹಾಜರಾಗಿಲ್ಲ’ ಎಂದು ಪಟ್ಟಣ ಠಾಣೆಸಬ್ ಇನ್ಸ್ಪೆಕ್ಟರ್ ಕರಿಬಸಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.