
ಹನೂರು: ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಅದಾನಿ ಸೋಲಾರ್ ಪ್ಲಾಂಟ್ ಅನ್ನ ಸಂತರ್ಪಣೆಯನ್ನು ಏರ್ಪಡಿಸಿತ್ತು.
ಪ್ಲಾಂಟ್ನ ಎಚ್ ಆರ್ ವೇಣುಗೋಪಾಲ್ ಮಾತನಾಡಿ, 5 ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈ ಬಾರಿಯ ಶಿವರಾತ್ರಿ ವೇಳೆ ಸಾವಿರಾರು ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಶಿವನ ಪ್ರತಿರೂಪ ಮಲೆ ಮಹದೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಅನ್ನ ನೀಡುವ ಕಾರ್ಯ ನೆರವೇರಿಸುತ್ತಿರುವುದು ಸಂತಸ ಮತ್ತು ಸಾರ್ಥಕತೆಯನ್ನು ತಂದಿದೆ ಎಂದರು.
ಪಿ.ಎಸ್.ಎಚ್. ಸೆಲ್ವಂ ಮಾತನಾಡಿ, ಮಲೆಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಾರೆ. 6 ವರ್ಷಗಳಿಂದ ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ. ಮಹದೇಶ್ವರ ಸ್ವಾಮಿ ಸರ್ವರಿಗೂ ಒಳಿತನ್ನು ಮಾಡಲಿ ಎಂದರು.
ಎಎಸ್ಒ ಪ್ರದೀಪ್ ಕುಮಾರ್, ಕೆಂಪರಾಜು, ಸಂತೋಷ್ ಕುಮಾರ್, ಸಿಬ್ಬಂದಿ ಗೋವಿಂದ ರಾಜು, ಪ್ರಭುಸ್ವಾಮಿ, ಶಿವಶಂಕರ್, ನಂದೀಶ್, ಲೋಕೇಶ್ ಇದ್ದರು.